ಆದ್ಯೋತ ಸುದ್ದಿನಿಧಿ:
ಆ ಸಂಜೆ ಎರಡು ಕಾರ್ಯಕ್ರಮಗಳು ನಮ್ಮ ಕಣ್ಣು ಮುಂದೇನೆ ನೆಡೆಯಿತು – ಅಂದು 18-01.2025.
ಸಂಜೆ ಐದು ಇರಬಹುದು, ದಪ್ಪಗಾಲು ಹಾಕುತ್ತಾ ನಾನು, ನನ್ನ ಮನೆಯವರೆಲ್ಲರೂ Kulturhaus ಫ್ರಾಂಕ್ಪಫರ್ಟ್ ಗೆ ಹೊರಟೆವು. ಇದೇ ಮೊದಲು ಎಲ್ಲರೂ ಒಂದು ಒಳ್ಳೆ ಕಾರ್ಯಕ್ರಮಕ್ಕೆ ಒಟ್ಟಿಗೆ ಹೀಗೆ ಹೊರ್ಟಿದ್ದು.
ಒಳಗೆ ಪ್ರವೇಶಿಸಿದಹಾಗೆ, ಚಿರಪರಿಚಿತ ಮುಖಗಳು, ಕಿಕ್ಕಿರಿದ ಜನಸ್ತೋಮ. ಎಲ್ಲಾ ನಮ್ಮ ಫ್ರಾಂಕ್ಫರ್ಟ್ ಕನ್ನಡಿಗರು. ವಿಷಯ ಅಲ್ಲೇ ಇರೋದು…
ಎಲ್ಲರನ್ನೂ ಮಾತನಾಡಿಸುತ್ತ, ಹಾಗೆ ಒಂದು ಸುತ್ತ ಒಳಗೆ ಹೋಗಿ ಬಂದು ನಮಗೆ ಸೂಕ್ತ ಅನಿಸಿದ ಜಾಗಕ್ಕೆ ನಮ್ಮ ಕರವಸ್ತ್ರ ಹಾಕಿ ಬಂದೆವು. ವೇದಿಕೆಯ ಹಿನ್ನೆಲೆಯಲ್ಲಿ ಎರಡು ಚೌಕಿ… ಒಂದು ಯಕ್ಷಮಿತ್ರರಿಗಾಗಿ, ಇನೊಂದು ಬೆಳಕು ಚಿತ್ರ ನಾಟಕ ತಂಡಕ್ಕಾಗಿ. ಯಾವ ನಾಟಕ, ಯಾವ ಯಕ್ಷ ಪ್ರಸಂಗ ಅಂತ ಅಲ್ಲೇ ಗೊತ್ತಾಗಿದ್ದು
ಕಾರ್ಯಕ್ರಮ ಒಂದು: ನನ್ನ ಶಾಲಾ-ಕಾಲೇಜು ದಿನಗಳಲ್ಲಿ ನನ್ನ ಅಚ್ಚುಮೆಚ್ಚಿನ ನಾಟಕ ಬರಹಗಾರರಾದ ಶ್ರೀ ಟಿ ಪಿ ಕೈಲಾಸಂ ಅವರ ನೆರೆಹೊರ್ಕೆನೆವೆ ನಾಟಕ. ಬೆಳಕು ಚಿತ್ರ ನಾಟಕ ತಂಡ Berlin ನಿಂದ ಇಲ್ಲಿಗೆ ಬಂದು ಈ ಪ್ರದರ್ಶನ ಕೊಡುತ್ತಿದ್ದರು. ಮೊದಲನೆಯದಾಗಿ ಕನ್ನಡ ನಾಟಕ ಜರ್ಮನಿಯಲ್ಲಿ ಬಹಳ ಕಷ್ಟನೆ, ಅಂತದ್ರಲ್ಲಿ ಟಿ ಪಿ ಕೈಲಾಸಂ ಅವರದ್ದು ಅಂದ್ರೆ ಕೇಳಬೇಕಾ? ಕೊಟ್ಟ ಸಮಯದಲ್ಲಿ ಬಾರೀ ಅಚ್ಚುಕಟ್ಟಾಗಿ ಅತೀ ಚೊಕ್ಕದಾಗಿ ನೆಡೆಸಿ ಕೊಟ್ಟರು. ಹಾವ, ಬಾವ, ನಟನೆ, ಪಕ್ಕಾವಾದ್ಯ ಹಾಗು ಹಾಡುಗಳು ಎಲ್ಲಾ ನುರಿತ ಕಲಾವಿದರಿಗಿಂತ ಚೆನ್ನಾಗಿ ಮೂಡಿಬಂದಿತ್ತು. ಒಟ್ಟಿನಲ್ಲಿ ಒಂದು 25-30 ವರ್ಷಗಳು ಹಿಂದಿನ ದಿನಗಳ ನೆನಪಿನಲ್ಲಿ ಮುಳುಗಿಹೋದೆ. ಆ ಕಾಲದ ಆ ನಾಟಕೋತ್ಸವಗಳು, ಶಾಲಾ ಕಾಲೇಜುಗಳ್ಳಲಿ ನಮ್ಮ ನಾಟಕಗಳು, ಇವೆಲ್ಲಾ ಹಾಗೆ ಮೆಲಕು ಹಾಕುವಂತೆ ಮಾಡಿತು.
ಕಾರ್ಯಕ್ರಮ ಎರಡು: ನಮ್ಮದೇ ತಂಡ ಯಕ್ಷಮಿತ್ರರು ನೆಡೆಸಿಕೊಟ್ಟ ಪ್ರಸಂಗ ಸುಭದ್ರ ಕಲ್ಯಾಣ. ಈ ಪ್ರಸಂಗವನ್ನು ಹಾಸ್ಯಪ್ರಸಂಗವನ್ನಾಗಿ ಮಾಡಿದ ತಂಡದ ಶ್ರಮ ಶ್ಲಾಘನೀಯ. ತಂಡದಲ್ಲಿ ಒಳ್ಳೊಳ್ಳೆ ಹೊಸ ಪರಿಚಯ ನೋಡಲು ಖುಶಿ ಆಯಿತು. ಬಲರಾಮನ ಅಬ್ಬರ (ಅಪೂರ್ವ ಬೆಳೆಯೂರು), ಮುಂಗೋಪ ಮಹಾಬಲ ಹೆಗಡೆಯವರನ್ನು ನೋಡಿದ ಹಾಗೆ ಆಯಿತು, ಸನ್ಯಾಸಿ ಅರ್ಜುನನ (ಶ್ರೀಹರಿ ಹೊಸಮನೆ) ಕಳ್ಳ ನೋಟ ಎಲ್ಲರನ್ನೂ ಮೋಡಿ ಮಾಡುವಂತಿತ್ತು, Poland ನಿಂದ ಬಂದ ಕಪಟ ನಾಟಕ ಸೂತ್ರದಾರಿ ಕೃಷ್ಣನ (ಪ್ರತೀಕ್ ಹೆಗಡೆ) ಪಾತ್ರಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಟಿದ್ದರು. ಸುಭದ್ರೆ (ಸ್ಮೀತಾ ಹೆಗಡೆ) ಹಾಗು ದುರ್ಯೋಧನ (ಸುಷ್ಮಾ ರವೀಂದ್ರ) ನುರಿತ ಕಲಾವಿದರು, ಚೊಕ್ಕದಾಗಿ ನೆಡೆಸಿಕೊಟ್ಟಿರು. ಈ ಪ್ರಸಂಗದ ಬೆನ್ನೆಲುಬಾಗಿ ದೂತ (ಶಶಿಧರ ನಾಯರಿ), ಸಮಯಕ್ಕೆ ತಕ್ಕ ಚಟಾಕೆ, ವೇಷ , ಹಾಗು ಸ್ಥಳೀಯ ಭಾಷಾ ಪ್ರಯೋಗ ಎಲ್ಲಾ, ಈ ಪ್ರಸಂಗಕ್ಕೆ ಇನ್ನು ಹೆಚ್ಚು ಮೆರುಗು ನೀಡಿತು.
ಇಲ್ಲಿಗೆ ಎರಡು ಕಾರ್ಯಕ್ರಮಗಳು ಚೊಕ್ಕದಾಗಿ ಒಂದೇ ಸೂರಿನಡಿಯಲ್ಲಿ ಎರಡು ತಂಡಗಳು ನೆಡಿಸಿ, ಬಂದ ಎಲ್ಲಾ ಪ್ರೇಕ್ಷಕ ವರ್ಗಗಳ ಮನ ಗೆದ್ದಿದರು.
ಮುಂದೆ ಇನ್ನು ದೊಡ್ಡ ಕೆಲಸ ಬಾಕಿ ಇತ್ತು. ಹೋದ ವರ್ಷದಂತೆ ಈ ವರ್ಷ ಕೂಡ ಇಬ್ಬರು ಕಲಾ ತಪಸ್ವಿಗಳಿಗೆ ಆಧರಿಸಿ ಸತ್ಕರಿಸೋ ಕೆಲಸ. ಇದು ಅನಿವಾಸಿ ಭಾರತೀಯ ಕಲಾ ತಪಸ್ವಿಗಳಿಗೆ ಸಂದ ಗೌರವ ಹಾಗು ತನ್ಮೂಲಕ ಅದನ್ನು ನೆಡೆಸಿಕೊಟ್ಟ ಯಕ್ಷಮಿತ್ರರಿಗೂ ಕಲಾ ಅಭಿಮಾನಿಗಳ ಪ್ರೀತಿ.
ಮೊದಲ ಕಲಾ ತಪಸ್ವಿ ಶ್ರೀಮತಿ ಧನ್ಯ ರಾಮನ್. ಈಕೆ ನಮ್ಮ ಹೆಮ್ಮೆಯ ಕನ್ನಡತಿ ಹಾಗು ವೃತ್ತಿ IT ಆದರೂ ಕಲೆ ಬಗ್ಗೆ ಬಾರಿ ಕಾಳಜಿ, ತಮ್ಮ ಶಿಕ್ಷಣ ಹಾಗು ಶಿಸ್ತಿನ ಮೂಲಕ ಹತ್ತು ಹಲವು ಯುವ ಕಲಾವಿದರನ್ನು ತಿದ್ದಿ ತೀಡಿದ ಹೆಮ್ಮೆ. ಇವರಿಗೆ ಸಿಕ್ಕ ಹಲವಾರು ಪ್ರಶಸ್ತಿ, ಬಿರುದು ಹಾಗು ಸನ್ಮಾನಗಳೊಂದಿಗೆ ಇದು ಒಂದಾಗಿದೆ. ಇವರ ಪ್ರಶಸ್ತಿ ಪತ್ರ ಓದುವ ಬಾಗ್ಯ ನನ್ನದಾಗಿತ್ತು.
ಮತ್ತೊಬ್ಬ ಕಲಾ ತಪಸ್ವಿ ಕುಮಾರಿ ಶ್ಯಾನಿ ಮ್ಯಾಥ್ಯೂ. ಇವರು ಮೂಲತಃ ಕೇರಳದ ಕಡೆ ಆದರೂ, ಹುಟ್ಟಿ ಬೆಳದ್ದಿದು ಜರ್ಮನಿಯಲ್ಲಿ. ಇಲ್ಲೇ ಇದ್ದು, ಇದೆ ವಾತಾವರಣದಲ್ಲಿ ನಮ್ಮ ಕಲೆಯ ಬಗ್ಗೆ ಬಾರಿ ಉತ್ಸಾಹ ಹಾಗು ಅದನ್ನು ಬೆಳಸುವ ನಿಟ್ಟಿನಲ್ಲಿ ಅಪಾರ ಕೃಷಿ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಈ ಸಂಜೆ ಒಮ್ಮೆ ನಮ್ಮ ಊರಿಗೆ ಹೋಗಿ ಬಂದ ಅನುಭವ… ಕನ್ನಡ ಕಲರವ, ನಾಟಕ, ಹಾಸ್ಯ, ಯಕ್ಷಗಾನ, ಕಲಾ ತಪಸ್ವಿಗಳ ಸತ್ಕಾರ. ಈ ಅನುಭವ ನಮ್ಮ ಮುಂದಿನ ಪೀಳಿಗೆಗೂ ಉಣಬಡಿಸಿದ ನಮ್ಮ ಹೆಮ್ಮೆಯ ತಂಡ ಯಕ್ಷಮಿತ್ರರಿಗೆ ಅನಂತಾನಂತ ಧನ್ಯವಾದಗಳು! ಜೊತೆಗೆ, ಸ್ಥಳಿಯ ಕನ್ನಡ ಸಂಘ ರೈನ್ ಮೈನ್ ಕನ್ನಡ ಸಂಘದ ಬೆಂಬಲ, ಶ್ಲಾಘನೀಯ.
ಬರಹ:
ಹರೀಶ್ ನಾವಡ