ಪ್ರವಾಹದಿಂದ ಮನೆ ಕಳೆದುಕೊಂಡೋರಿಗೆ ಇನ್ನೂ ಇಲ್ಲ ಮನೆಭಾಗ್ಯ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿಯೋಜನೆಯಡಿ ಬರಬೇಕಾದ ಹಣ ಬಾರದೇ ಸಂತ್ರಸ್ತರು ಪರದಾಡುವಂತಾಗಿದೆ. ಸಾಲ ಮಾಡಿ ಮನೆ ಕಟ್ಟಿಕೊಂಡವರು ಈಗ ಸರ್ಕಾರದಿಂದ ಹಣ ಮಂಜೂರಾಗದೇ ತೊಂದರೆ ಅನುಭವಿಸುತಿದ್ದಾರೆ.
2019 ರಿಂದ 2020 ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸಾವಿರಾರು ಜನ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ 2019 ರಲ್ಲಿ 2265 ಮನೆಗಳು ಹಾನಿಯಾಗಿ ಕುಸಿದು ಬಿದ್ದಿದ್ದವು. ಇನ್ನು 2020 ರಲ್ಲಿ 1273 ಮನೆಗಳು ಪ್ರವಾಹಕ್ಕೆ ಹಾನಿಯಾಗಿದ್ದವು. ಸರ್ಕಾರದಿಂದ ಪ್ರತಿ ಮನೆ ನಿರ್ಮಾಣಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮೊದಲ ಹಂತದಲ್ಲಿ ಒಂದು ಲಕ್ಷ ರೂ ಮಂಜೂರು ಮಾಡಿತ್ತು. ಇನ್ನು ಹಣ ನೇರ ಖಾತೆಗೆ ಬಂದಿದ್ದರಿಂದ ಮನೆ ಕಳೆದುಕೊಂಡವರು ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದರು.
ಆದರೆ ರಾಜ್ಯ ಸರ್ಕಾರದ ಅಧಿಕಾರಿಗಳ ನಿರ್ಲಕ್ಷದಿಂದ 2019 ರಿಂದ ಈವರೆಗೆ ಎರಡನೇ ಹಂತದ ಮಂಜೂರಿನ ಹಣ ಜನರ ಖಾತೆಗೆ ಸೇರಿಲ್ಲ. ಸರ್ಕಾರ ಹಣ ನೀಡುತ್ತೆ ಅನ್ನೋ ನಂಬಿಕೆಯಿಂದ ಕರೋನಾ ಸಂದರ್ಭದಲ್ಲೂ ಕೂಡ ಲಕ್ಷಾಂತರ ರುಪಾಯಿ ಸಾಲ ಮಾಡಿ ಸೂರು ನಿರ್ಮಿಸಿಕೊಂಡವರು ಹಾಗೂ ಅಲ್ಪ ಮನೆ ನಿರ್ಮಿಸಿಕೊಂಡವರು ಇತ್ತ ಸೂರೂ ಇಲ್ಲ, ಅತ್ತ ಹಣವೂ ಇಲ್ಲ ಎಂಬುವಂತಾಗಿದೆ.
ಜಿಲ್ಲೆಯ ಹಲವು ಭಾಗದಲ್ಲಿ ಸರ್ಕಾರದ ವೆಬ್ ಸೈಟ್ ನಲ್ಲಿ ಜಿಪಿಎಸ್ ಹಾಗೂ ಡಾಟ ಎಂಟ್ರಿ ಮಾಡುವ ಸಮಸ್ಯೆಯಿದೆ. ಹೀಗಾಗಿ ಹಲವು ತಾಲೂಕಿನಲ್ಲಿ ದಾಖಲೆಗಳನ್ನು ಸಮರ್ಪಕವಾಗಿ ಅಧಿಕಾರಿಗಳು ಅಪ್ ಲೋಡ್ ಮಾಡಿಲ್ಲ. ಇನ್ನು ರಾಜ್ಯ ಹಾಗೂ ಕೇಂದ್ರದಿಂದ ಬರಬೇಕಾದ ಹಣ ಸಂಬಂಧಪಟ್ಟ ಇಲಾಖೆಯ ಖಜಾನೆಯಲ್ಲಿದೆ. ಆದ್ರೆ ಅಧಿಕಾರಿಗಳ ನಿರ್ಲಕ್ಷ ದಿಂದ ಎರಡನೇ ಹಂತದಲ್ಲಿ ಜಿಲ್ಲೆಗೆ ಮಂಜೂರಾಗಿಲ್ಲ.ಇನ್ನು ಜಿಲ್ಲಾಡಳಿತ ಕೂಡ ಈ ಕುರಿತು ಸರ್ಕಾರದ ಗಮನಕ್ಕೆ ತಂದಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಅಂತಾರೆ ಅಧಿಕಾರಿಗಳು.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಜನರು ಪ್ರವಾಹ, ಕರೋನಾ ಮಹಾಮಾರಿ ಹೀಗೆ ಒಂದಲ್ಲಾ ಒಂದು ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದಾರೆ.
ಇತ್ತ ಸಾಲ ಮಾಡಿ ಸೂರು ನಿರ್ಮಿಸಿಕೊಂಡವರಿಗೆ ಹಣ ಮಂಜೂರಾಗದೇ, ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೇ ಸಂತ್ರಸ್ಥರು ಕಣ್ಣೀರಿನ ಜೀವನ ಸಾಗಿಸುವಂತಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನಿಸಿ ಕಳೆದ ಎರಡು ವರ್ಷದಲ್ಲಿ ಪ್ರವಾಹದಲ್ಲಿ ಸೂರು ಕಳೆದುಕೊಂಡವರಿಗೆ ಉಳಿದ ಹಣ ನೀಡಿ ನೊಂದವರಿಗೆ ಆಶ್ರಯವಾಗಲಿ.
####
ಶ್ರೀಧರ ಮದ್ದಿನಕೆರೆ