ಕೆ.ವಿ .ಸುಬ್ಬಣ್ಣ ಎಂಬ ರಂಗಗಾರುಡಿಗ*****
ಆಗ ನಾನು ತುಂಬ ಒತ್ತಡದಲ್ಲಿದ್ದ ಸಮಯ. ಅಪ್ಪ, ಅಮ್ಮನಿಗೆ ವಯಸ್ಸಾಗಿದ್ದಲ್ಲದೇ ಸಂಸಾರದ ಆರ್ಥಿಕ ಸ್ಥಿತಿ ಕಷ್ಟದಲ್ಲಿತ್ತು. ಮೂವರು ಅಕ್ಕಂದಿರ ಜವಾಬ್ದಾರಿಯ ಜೊತೆಗೆ ಹಿರಿ ಅಕ್ಕನ ಮದುವೆಯ ಕುರಿತು ಓಡಾಡಬೇಕಿತ್ತು. ನಮ್ಮ ವ್ಯವಹಾರವಿದ್ದ ಅಡಕೆ ಸೊಸೈಟಿಯಲ್ಲಿ ಹಣದ ವ್ಯವಹಾರ ತೊಡಕಿನಲ್ಲಿತ್ತು. ಸ್ವಜಾತಿಯ ಹಿತಶತ್ರುಗಳು ಕುಹಕ, ಹೀಗಳಿಕೆಯ ಜೊತೆಗೆ ಅಕ್ಕಂದಿರ ಬಗ್ಗೆ ಹಿಂದಿನಿಂದ ಇಲ್ಲಸಲ್ಲದ ಮಾತನಾಡುತ್ತಿದ್ದುದು ಕಿವಿಗೆ ಬೀಳುತ್ತಿತ್ತು.
ಯಾವ ಜಾತಿಯಲ್ಲಾದರೂ ಬಡತನದಲ್ಲಿ ಗಂಜಿ ಉಂಡಾದರೂ ನೆಮ್ಮದಿಯಲ್ಲಿ ಬದುಕಬಹುದೇನೋ? ಆದರೆ ಬ್ರಾಹ್ಮಣ ಜಾತಿಯಲ್ಲಿ ಹಾಗಲ್ಲ. ಒಬ್ಬ ಕಷ್ಟದಲ್ಲಿದ್ದಾನೆ ಎಂದರೆ ಸಹಾಯಕ್ಕೆ ಬರುವ ಬದಲು ಉಣ್ಣುವ ಅನ್ನಕ್ಕೂ ಕಲ್ಲು ಹಾಕುವ, ಆದಷ್ಟು ನೆಮ್ಮದಿಯಲ್ಲಿ ಬದುಕಲು ಬಿಡದ ಹೀನ ಸ್ವಭಾವ ಇವರದ್ದು. ಇವೆಲ್ಲ ಯಾಕೆ ಹೇಳಬೇಕಾಯಿತು ಅಂದರೆ ನಾನೇನು ಕೇವಲ ರಂಗಭೂಮಿಯ ಗೀಳಿನಿಂದ ನೀನಾಸಂ ಅಥವಾ ಸುಬ್ಬಣ್ಣನ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಅಂಥ ಅತ್ಯಂತ ಕಟುವಾದ, ಸಂಕಟದ, ನೋವಿನ,ಮಾನಸಿಕ ಹಿಂಸೆಯ ದಿನಗಳಲ್ಲಿ ನನ್ನ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಕುಗ್ಗದಂತೆ ಕಾಪಾಡಿದ್ದು ಯಾವ ದೇವರು ಅಲ್ಲ, ದೇವಸ್ಥಾನವೂ ಅಲ್ಲ. ಅದು ಸುಬ್ಬಣ್ಣ ಮತ್ತು ನೀನಾಸಂ. ಅವರಿಂದ ಒಂದೇ ಒಂದು ಪೈಸೆ ನೆರವನ್ನೂ ಪಡೆದಿಲ್ಲ, ಆದರೆ ಅದಕ್ಕಿಂತ ಅದೆಷ್ಟೋ ಮಿಗಿಲಾದ ಶಕ್ತಿಯನ್ನು ಪಡೆದಿದ್ದೇನೆ. ಮಾನಸಿಕ ವಿಕಲ್ಪದಿಂದ ಕಾಪಾಡಿದ, ಬದುಕಿನಲ್ಲಿ ಹೋರಾಟದ ಸಾಮಥ್ರ್ಯವನ್ನ ಕೊಟ್ಟ ಸುಬ್ಬಣ್ಣ ಮತ್ತು ನೀನಾಸಂ ಸಹಯೋಗ ಈ ಮಟ್ಟದಲ್ಲಿ ಉಳಿಸಿದೆ. ನನ್ನ ಆಗಿನ ಅನುಭವಗಳನ್ನ, ಆಗುತ್ತಿದ್ದ ಅನಿಸಿಕೆಗಳನ್ನ ಎಲ್ಲೋ ಸಿಕ್ಕ ಒಂದು ಡೈರಿಯಲ್ಲಿ ಅವೆಲ್ಲವನ್ನ ಬರೆಯುತ್ತಿದ್ದೆ. ನನ್ನ ರೋಷ ಅಲ್ಲಿ ಕಾರಿಕೊಳ್ಳುತ್ತಿದ್ದೆ. ಈಗಲೂ ಆ ಡೈರಿ ನನ್ನ ಬಳಿ ಜೋಪಾನವಾಗಿದೆ.ಆ ಕುರಿತಾದ ಆಸಕ್ತಿ ನಂತರ ಬೆಳೆಯಿತು ಅಷ್ಟೇ. ಆಗ ಘನಘೋರ ನಾಸ್ತಿಕನಾಗಿದ್ದ, ಜನಿವಾರ ತೆಗೆದು, ಸಂಧ್ಯಾವಂದನೆ ಇರಲಿ, ದೇವರ ಪೂಜೆಯನ್ನೇ ಮಾಡದಿದ್ದ ಕಠೋರ ನಿಲುವು ಆಗಿನದು( ಈ ನಿಲುವಿಗೆ ಸ್ವಜಾತಿಯವರ ಕುತ್ಸಿಕ ವರ್ತನೆಯಿಂದ ಉಂಟಾದ ರೋಷ ಕಾರಣವಾಗಿರಬಹುದು ಅನ್ನಿಸುತ್ತದೆ ಈಗ).
ನಾನು ಹೆಗ್ಗೋಡಿಗೆ ಹೋದಾಗ ಕೆಲವು ಸಾರಿ ಸುಬ್ಬಣ್ಣ ಇರುತ್ತಿರಲಿಲ್ಲ; ಆದರೂ ಅಲ್ಲಿನ ಕಚೇರಿಯಲ್ಲಿ ಕೂತು, ಸ್ಟೇಜ್ನಲ್ಲಿ ನಡೆಯುತ್ತಿದ್ದ ತರಬೇತಿಗಳನ್ನ ನೋಡಿ ವಾಪಸ್ಸಾಗುತ್ತಿದ್ದೆ.
ಕಚೇರಿಯ ವ್ಯವಸ್ಥಾಪಕ ಹಿರಣ್ಣಯ್ಯ ಭಟ್ಟ, ಸಿಬ್ಬಂದಿಗಳಾದ ಪಣಿಯಮ್ಮ, ರಂಗಶಿಕ್ಷಣ ಕೇಂದ್ರದ ಪ್ರಿನ್ಸಿಪಾಲ್ ಆಗಿದ್ದ ಪ್ರಸಿದ್ಧ ರಂಗನಿರ್ದೇಶಕ ಚಿದಂಬರರಾವ್ ಜಂಬೆ, ಉಪನ್ಯಾಸಕರಾದ ಮಹಾಬಲೇಶ್ವರ, ವಿಶಣ್ಣ, ಪ್ರತಿಭಾವಂತ ಮದ್ದಳೆ-ಚಂಡೆವಾದಕ ನಾಗರಾಜ, ನೀನಾಸಂಗೆ ಅನಿವಾರ್ಯ ಎನ್ನುವಂತಿದ್ದ ಸಹಾಯಕ ಬಂಗಾರಿ, ಕಾಲೇಜು ಮುಗಿಸಿ ಸಂಜೆ ಬರುತ್ತಿದ್ದ(ರಜೆಯಲ್ಲಿ ಬೆಳಗಿನ ವೇಳೆ) ಪ್ರಸಿದ್ಧ ವಿಮರ್ಶಕ ಟಿ.ಪಿ.ಅಶೋಕ ಮುಂತಾದವರ ಪರಿಚಯವಾದ ಕಾರಣ ಒಂಟಿ ಅನ್ನಿಸುತ್ತಿರಲಿಲ್ಲ. ಅವರೂ ನನ್ನ ಜೊತೆ ಸೌಹಾರ್ದದಿಂದಲೇ ವರ್ತಿಸುತ್ತಿದ್ದರು.
ಮಳೆಗಾಲ ಕಳೆದು ಕೇಂದ್ರ ಆರಂಭಗೊಂಡ ನಂತರ ಅಲ್ಲಿ ಚಟುವಟಿಕೆಗಳು ಹೆಚ್ಚುತ್ತಿದ್ದವು. ಸುಬ್ಬಣ್ಣ ಇದ್ದರೆ ಏನೋ ಸಜೀವತೆ ಇರುತ್ತಿತ್ತು. ನಾನು ಬಹುಪಾಲು ರವಿವಾರ ಅಲ್ಲಿಗೆ ಹೋಗುತ್ತಿದ್ದೆ. ಒಂದಿಬ್ಬರು ಇರುತ್ತಿದ್ದರು ಅಷ್ಟೇ. ಸುಬ್ಬಣ್ಣ ಸ್ವಲ್ಪ ಬಿಡುವಿನಲ್ಲಿರುತ್ತಿದ್ದರು. ಸಾಕಷ್ಟು ಮಾತನಾಡುತ್ತಿದ್ದೆವು. ಅವರ ಜೊತೆ ನನ್ನ ಮಾತುಗಳೇನೂ ಧೀರ್ಘವಾಗಿರುತ್ತಿರಲಿಲ್ಲ. ಅವರೂ ಏನೇನೋ ಬರವಣಿಗೆ ಕೆಲಸದಲ್ಲಿರುತ್ತಿದ್ದರು. ಆದರೂ ಒಂದೇ ಒಂದು ದಿನ ನನ್ನ ಅಕಾಲಿಕ ಭೇಟಿಗೆ ಬೇಸರಿಸಲಿಲ್ಲ, ಮುಖದಲ್ಲಿ ಈತ ಯಾಕಾದರೂ ಬಂದನೋ ಎನ್ನುವ ಭಾವ ಇರುತ್ತಿರಲಿಲ್ಲ.
ಮಳೆಗಾಲದ ದಿನಗಳಲ್ಲಿ ಒಮ್ಮೆ ಹೋದಾಗ ಸುಬ್ಬಣ್ಣ ಯಾವುದೋ ನಾಟಕದ ಅನುವಾದದಲ್ಲಿದ್ದರು. ಸ್ವಲ್ಪ ಹೊತ್ತು ಮಾತನಾಡಿ ತಮ್ಮ ಕೆಲಸದತ್ತ ಹೊರಳುವ ಮುನ್ನ ‘ನಿಮಗೆ ಬೇಸರವಾದ್ರೆ ಹೀಗೇ ಒಂದಿಷ್ಟು ಓಡಾಡಿ ಬನ್ನಿ’ ಎಂದರು. ಮಳೆ ಬೀಳುತ್ತಿರಲಿಲ್ಲ. ಹಾಗಾಗಿ ಭೀಮನಕೋಣೆ ರಸ್ತೆಯಲ್ಲಿ ಒಂದಿಷ್ಟು ದೂರ ಹೋದೆ. ಇದ್ದಕ್ಕಿದ್ದಂತೇ ರಭಸದ ಮಳೆ ಸುರಿಯತೊಡಗಿತು. ಛತ್ರಿ ಕಚೇರಿಯಲ್ಲೇ ಬಿಟ್ಟು ಬಂದ ಕಾರಣ ತೊಯ್ಯಿಸಿಕೊಳ್ಳಬಾರದೆಂದು ರಸ್ತೆ ಹತ್ತಿರವಿದ್ದ ಉದ್ಯಮದ ಕಟ್ಟಡದ ಬಳಿ ಹೋಗಿ ನಿಂತೆ.(ಅನಿವಾರ್ಯವಾಗಿ ಉದ್ಯಮದ ಮಳಿಗೆ ಅಂತ ಬರೆದಿದ್ದೇನೆ) ಸುಮಾರು ಹೊತ್ತಾದ ನಂತರ ಒಳಗಿನಿಂದ ಓರ್ವ ಬಂದು ಒಳಗೆ ಬರಲು ಕರೆದ. ಒಳಹೋದಾಗ ಅದರ ಮಾಲೀಕ ತನ್ನ ಚೇಂಬರ್ ಒಳಗೆ ಬರಲು ಕರೆದು ಕೂರಿಸಿಕೊಂಡು ನನ್ನ ಬಗ್ಗೆ ವಿಚಾರಿಸಿದ. ನಾನು ಸ್ಟೇಜ್ಗೆ ಬಂದವನೆಂದು ಮೊದಲೇ ಆತನಿಗೆ ಗೊತ್ತಾಗಿರಬೇಕು; ಎಷ್ಟೆಂದರೂ ವ್ಯಾಪಾರಸ್ಥರು! ನನ್ನ ಬಗ್ಗೆ ತಿಳಿದ ನಂತರ ನಿಮ್ಮಂಥ ಹುಡುಗರು ಯಾಕೆ ನಾಟಕ,ಪಾಟಕ ಅಂತಾ ಓಡಾಡಿ ಜೀವನ ಹಾಳು ಮಾಡ್ಕೋತೀರಿ. ಏನಾದ್ರೂ ಒಳ್ಳೇದನ್ನ ಮಾಡಿ ಅಂತೆಲ್ಲ ಬೋಧನೆಗೆ ಶುರು ಹಚ್ಚಿದ. ನನಗೇಕೋ ಅಡ್ಡ ವಾಸನೆ ಹೊಡೆಯಹತ್ತಿ, ಅಷ್ಟೊತ್ತಿಗೆ ಮಳೆ ಕಡಿಮೆಯಾದದ್ದಕ್ಕೆ ಬರ್ತೀನಿ ಅಂತಾ ಹೊರಬಂದೆ. ಸಾಕಷ್ಟು ಸಮಯವಾದದ್ದರಿಂದ ಸುಬ್ಬಣ್ಣ ಮನೆಗೆ ಹೊರಟವರು ನನ್ನ ಕಾಯುತ್ತಿದ್ದರು. ಯಾಕೋ ಮುಖದಲ್ಲಿ ಚೂರು ಅಸಹನೆ ಇತ್ತು. ‘ಎಲ್ಲೋಗಿದ್ರೀ? ಸುಮಾರು ಹೊತ್ತಾಯ್ತಲ್ಲಾ?’ ಎಂದಾಗ ‘ಭೀಮನಕೋಣೆ ರಸ್ತೆಲಿ ಹೋಗಿದ್ದೆ. ಮಳೆ ಬಂತು,ಅಲ್ಲೇ ನಿಂತೆ’ಅಂದೆ. ‘ಎಲ್ಲಿ, ಆ ಮಳಿಗೆಯಲ್ಲಾ? ಅವರು ನೀನಾಸಂ ಬಗ್ಗೆ ಕೆಟ್ಟದಾಗಿ ಹೇಳಿರಬೇಕಲ್ವಾ?’ ಅಂದರು. ‘ಹೌದು’ಅಂದೆ. ಬಾಯಲ್ಲಿದ್ದ ಕವಳವನ್ನು ಅವರದೇ ಸ್ಟೈಲಿನಲ್ಲಿ ಉಗಿದುಬಂದು, ಮತ್ತೆ ಸಂಚಿ ಬಿಚ್ಚಿ ಹೊಸ ಕವಳ ಹಾಕುತ್ತ ಮೌನವಾಗಿದ್ದವರು ‘ನೋಡಿ ಗಂಗಾಧರ್, ಅವರು ಏನೆಂದರೂ ಎನ್ನುವದನ್ನ ಇಲ್ಲಿಯೇ ಊಹಿಸಬಲ್ಲೆ. ಪ್ರತಿ ಊರಲ್ಲೂ ಇಂಥವರಿರ್ತಾರೆ. ಬೇರೆಯವರ ಮನಸ್ಸನ್ನ ಕೆಡಿಸುವವರು. ನಾವು ಮಾಡ್ತಿರೋ ಕೆಲಸ ನಿಮಗೆ ಇಷ್ಟವಾದ್ರೆ ಅಂಥವರ ಮಾತನ್ನ ಮನಸ್ಸಲ್ಲಿ ಇಟ್ಕೋಬೇಡಿ. ಅವರು ಹೇಳಿದ್ದು ಸರಿ ಅನ್ನಿಸಿದ್ರೆ ಸ್ಟೇಜ್ಗೆ ಬರಬೇಡಿ’ ಎಂದು ಸುಮ್ಮನಾಗಿಬಿಟ್ಟರು. ನನಗೆ ಯಾಕೋ ವೇದನೆಯಾಯಿತು. ‘ ನನಗೆ ಅವರ ಮಾತು ಹಿಡಿಸಲಿಲ್ಲ. ಕೇಳಿಸ್ಕೊಂಡೆ ಅಷ್ಟೇ. ಅವರ ಹೇಳಿದ್ದು ನನ್ನಲ್ಲಿ ಉಳಿದೇ ಇಲ್ಲ’ ಸಣ್ಣಗೆ ಹೇಳಿದೆ. ಸುಬ್ಬಣ್ಣ ಕವಳ ತುಂಬಿದ ಬಾಯಲ್ಲಿ ಮುಗುಳ್ನಕ್ಕರು. ಆಗ ಅಬ್ಬಾ! ಇಲ್ಲಿ ಕೂತಲ್ಲೇ ಅದೆಲ್ಲ ಹೇಗೆ ಗೊತ್ತಾಯ್ತು? ಎಂದು ತಬ್ಬಿಬ್ಬಾಗಿತ್ತು. ಆದರೆ ಅಷ್ಟರ ನಂತರದಲ್ಲಿ ಓರ್ವ ಸಂಘಟಕನ ಶಕ್ತಿ ಮತ್ತು ಸಂಕಟ ಹೇಗಿರುತ್ತದೆ ಎನ್ನುವದು ಅರಿವಿಗೆ ಬಂತು. ಕಟ್ಟಬಲ್ಲವರು ಕೆಲವರೇ, ಕೆಡವುವವರು ಹಲವರು.
ನಾನು ಸುಬ್ಬಣ್ಣ ಅವರ ಬಳಿ ಮಾತನಾಡುವದಿದ್ದರೆ ಬೆಳಿಗ್ಗೆ ಹೋಗುತ್ತಿದ್ದೆ. ನಾಟಕ ಅಥವಾ ಇನ್ನಿತರ ವಿಶೇಷ ಕಾರ್ಯಕ್ರಮಗಳಿದ್ದರೆ ಮಧ್ಯಾಹ್ನ ಹೋಗುತ್ತಿದ್ದೆ. ಹಲವು ಸಲ ಬೆಳಿಗ್ಗೆ ಹೋದವನು ಮಧ್ಯಾಹ್ನ ವಾಪಸ್ಸಾಗಿಬಿಡುತ್ತಿದ್ದೆ. ಅಲ್ಲಿ ಕುಡಿದ ಕಾಕಾಲ್ರ ಮೂರ್ನಾಲ್ಕು ಕಾಫಿಯೇ ಹಸಿವನ್ನ ಅಡಗಿಸಿ ಬಿಡುತ್ತಿತ್ತು.
ಒಮ್ಮೆ ಹೊರಟು ನಿಂತ ನನ್ನನ್ನ ಸುಬ್ಬಣ್ಣ ‘ ಬರ್ರೀ, ನಮ್ಮನೆಗೆ ಊಟಕ್ಕೆ ಹೋಗೋಣ’ ಎಂದರು. ಸಹಜವಾಗಿ ಹೇಳಿದರೇನೋ ಎಂದು ನಾನು ಅಂದ್ಕೊಂಡ್ರೆ ಅವರು ಒತ್ತಾಯಿಸತೊಡಗಿದರು. ನನಗೆ ಭಯ, ಸುಬ್ಬಣ್ಣನವರ ಮನೆಯಲ್ಲಿ ನಾನು ಊಟ ಮಾಡೋದಾ?. ಬಡತನ ಮತ್ತು ಅದು ಹುಟ್ಟಿಸುವ ಕೀಳರಿಮೆಯ ಪರಿಣಾಮ ಅದು. ಬನ್ನಿ ಎನ್ನುತ್ತ ಸುಬ್ಬಣ್ಣ ಹೆಗಲಿಗೆ ಬಗಲು ಚೀಲ ಏರಿಸಿ ಹೊರಟೇ ಬಿಟ್ಟರು. ನಾನು ಅನಿವಾರ್ಯವಾಗಿ ಹಿಂಬಾಲಿಸಿದೆ.
ಅವರ ಊರು ಹೆಗ್ಗೋಡಿನಿಂದ ಸುಮಾರು ಮೂರು ಕಿಮೀ.ದೂರದ ಮುಂಡಿಗೇಸರ. ಹೆಗ್ಗೋಡಿನಿಂದ ನಿಧಾನಕ್ಕೆ ಏರು ದಾರಿ, ನಂತರ ತಟ್ಟನೆ ಇಳುಕಲು. ಕೆಳಗಡೆ ಅಡಕೆ ತೋಟದ ಎದುರಿನ ಪ್ರದೇಶದಲ್ಲಿ ಊರು. ಮೊದಲನೇ ಮನೆ ಇವರದ್ದು. ಆಗ ಅವರ ಮಗ ಕೆ.ವಿ.ಅಕ್ಷರ ಇಂಗ್ಲೆಂಡಿನ ಲೀಡ್ಸ ಯೂನಿವರ್ಸಿಟಿಯಲ್ಲಿ ರಂಗಭೂಮಿಯ ಉನ್ನತ ಅಧ್ಯಯನಕ್ಕೆ ಹೋಗಿದ್ದರು. ಮನೆಯಲ್ಲಿ ಸುಬ್ಬಣ್ಣ ಮಡದಿ, ಅಮ್ಮ ಮಾತ್ರ. ನಾನು ಅವತ್ತು ಅಕ್ಷರಶ: ಬೆರಗಾಗಿದ್ದೆ. ಮನೆಗೆ ಹೋದವರೇ ಸುಬ್ಬಣ್ಣ ಕೈ,ಕಾಲು ತೊಳೆದು, ನನಗೂ ಅದನ್ನೇ ಮಾಡಿಸಿ ಒಳಹೋದರು. ಹೊರಬಂದಾಗ ಜುಬ್ಬಾ ಕಳಚಿ, ಬನಿಯನ್ ಹಾಗೂ ಲುಂಗಿಯಲ್ಲಿದ್ದರು. ಲುಂಗಿಯನ್ನು ಬಿಗಿದು ಹಿಂದಕ್ಕೆ ಗಂಟು ಹೊಡೆದಿದ್ದರು. ಸಪೂರನೆಯ ದೇಹಾಕೃತಿ ಅವರದ್ದು. ಅಷ್ಟರಲ್ಲಿ ತಮ್ಮ ಮಡದಿಗೆ ನನ್ನ ಪರಿಚಯಿಸಿದರು. ಅವತ್ತು ಅವರನ್ನ ನಾನು ಶಾರದಕ್ಕ ಅಂತಾ ಕರೆದಿದ್ದೆ. ಇವತ್ತಿಗೂ ನನ್ನ ಮನಸ್ಸಿನಲ್ಲಿ ಅದೇ ಇದೆ. ನನಗೆ ಪಂಚೆ ಕೊಟ್ಟರೂ ಬೇಡ ಎಂದೆ. ಒಳಗೆ ಕರೆದರು. ಸುಬ್ಬಣ್ಣ ಪುಟಪುಟನೆ ಓಡಾಡುತ್ತ ಊಟದ ಬಟ್ಟಲು, ಲೋಟ, ನೀರಿನ ತಂಬಿಗೆ ಇಟ್ಟು, ಬಟ್ಟಲಿಗೆ ಉಪ್ಪು,ಉಪ್ಪಿನಕಾಯಿ ಹಾಕುವದನ್ನು ನೋಡಿ ನಾನು ನಿಬ್ಬೆರಗಾಗಿದ್ದೆ. ಓರ್ವ ಪ್ರಸಿದ್ಧ ವ್ಯಕ್ತಿ, ಅಪಾರ ಪ್ರತಿಭೆಯ ಲೇಖಕ, ನಿರ್ದೇಶಕ, ರಂಗಕರ್ಮಿ,ಹೋರಾಟಗಾರನಾಗಿ ಯಾವ ಸಹಜತೆಯಲ್ಲಿ ಇರುತ್ತಿದ್ದರೋ ಅದೇ ತೆರನಾಗಿ ಇಲ್ಲಿ ಅವನ್ನೆಲ್ಲ ಮರೆತು ಕೇವಲ ಓರ್ವ ನಿಜ ಗೃಹಸ್ಥನಾಗಿ, ಸಹಜ ಮನುಷ್ಯನಾಗಿ ನಡೆದುಕೊಳ್ಳುತ್ತಿದ್ದರು. ಅದು ನೆಲದ ಮೇಲೆ ಸುಬ್ಬಣ್ಣ, ಶಾರದಕ್ಕ, ನಾನು ಮೂವರು ಸುತ್ತ ಕೂತು ಮಾಡಿದ ಊಟ. ಸ್ವಂತ ಮನೆಗಿಂತ ಭಿನ್ನ ಎನ್ನಿಸಲೇ ಇಲ್ಲ. ಅಷ್ಟರ ನಂತರವೂ ನಾಲ್ಕಾರು ಬಾರಿ ಸುಬ್ಬಣ್ಣ ಮನೆಗೆ ಕರೆದುಕೊಂಡು ಹೋಗಿದ್ದರು. ಒಮ್ಮೆ ಶಿವರಾಮ ಕಾರಂತರ ಜೊತೆಗೂ ಹೋಗಿದ್ದೆ. ತುಂಬು ಪ್ರೀತಿಯ, ತುಂಬು ಕಾಳಜಿಯ ಆ ಘಳಿಗೆ ನಿಜಕ್ಕೂ ಅಮೃತ ಘಳಿಗೆಗಳು. ಸಾಕಷ್ಟು ಆಸ್ತಿವಂತರಾದ, ಹಣಕಾಸಿನ ಸಾಮಥ್ರ್ಯ ಇದ್ದಿರಬಹುದಾದ ಸುಬ್ಬಣ್ಣ ಒಂದು ಸ್ವಲ್ಪವೂ ಅದರ ಪ್ರದರ್ಶನವನ್ನ ಮಾಡಲಿಲ್ಲ. ನನ್ನಂಥ ಊದಿದರೆ ಹಾರಿಹೋಗುವನನ್ನ ಅವರ್ಯಾಕೆ ಕಾಳಜಿ ತಗೋಬೇಕಿತ್ತು? ಅವರಿಗೆಲ್ಲೋ ನನ್ನ ಸಂಕಟ, ನೋವು, ಅಸಹಾಯಕತೆ ಕಂಡಿರಬೇಕು. ಮತ್ತು ನಾನು ವಿಶ್ವಾಸಿಕ, ನಿಜದ ಮನುಷ್ಯ ಅನಿಸಿರಬೇಕು- ಇಲ್ಲೇ ಅವರ ಮಡದಿ ಶಾರದಕ್ಕನವರ ಬಗ್ಗೆಯೂ ಹೇಳಿದರೆ ಸರಿ. ನಾನೇನು ಅವರಿಗೆ ತೀರಾ ಪರಿಚಿತನಲ್ಲ, ಅವರ ಮನೆಗೆ ಹೋದಾಗಿನ ಪರಿಚಯ. ಅವರು ಅಪರೂಪಕ್ಕೆ ಸ್ಟೇಜಿನ ಯಾವುದೋ ಕಾರ್ಯಕ್ರಮಕ್ಕೆ ಬಂದಾಗ ನಾನಾಗಿಯೇ ಮಾತನಾಡಿಸಿದ್ದೆ. ಶಾರದಕ್ಕ ಕುಟುಂಬದ, ತೋಟದ ಕೃಷಿಯ ನಿಗಾ, ಆಳುಗಳ,ಇನ್ನುಳಿದ ಬಹುತೇಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದುದಕ್ಕೆ ಸುಬ್ಬಣ್ಣನವರಿಗೆ ನಿರುಮ್ಮಳವಾಗಿ ತನ್ನ ಸೃಜನಶೀಲ ಕೆಲಸಗಳಲ್ಲಿ ತೊಡಗಿಕೊಳ್ಳಲು ಅವಕಾಶವಾಯಿತು ಎನ್ನುವದನ್ನು ಕೇಳಿದ್ದೆ. ಶಾರದಕ್ಕ ಅದರ ಜೊತೆಗೆ ಊರಿನ ಆಸಕ್ತ ಹೆಣ್ಣುಮಕ್ಕಳಿಗೆ ಸಂಗೀತವನ್ನೂ ಹೇಳಿಕೊಡುತ್ತಿದ್ದರಂತೆ.
ಒಮ್ಮೆ ಹೆಗ್ಗೋಡಿಗೆ ಹೋಗಿದ್ದಾಗ ಸುಬ್ಬಣ್ಣ ನಡೆಸುತ್ತಿದ್ದ ಅಕ್ಷರ ಪ್ರಕಾಶನದ ಮಳಿಗೆ ಹೊಕ್ಕೆ. ತಮ್ಮ ಪ್ರಕಾಶನದಿಂದ ಸುಬ್ಬಣ್ಣ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದು ಆ ಪುಸ್ತಕಗಳ ಜೊತೆಗೆ, ಇನ್ನಿತರ ಪ್ರಕಾಶನದಿಂದ ತರಿಸಿಕೊಂಡಿದ್ದ ಹಲವು ಪುಸ್ತಕಗಳೂ ಅಲ್ಲಿದ್ದವು. ಹೇಳಿ,ಕೇಳಿ ನಾನು ಓದಿನ ಗೀಳಿನ ಮನುಷ್ಯ ಆ ಪುಸ್ತಕಗಳನ್ನ ನೋಡಿ ಹಸಿವು ಕೆರಳಿದಂತಾಯ್ತು. ಭಕ್ಷ,ಭೋಜ್ಯವಿರಲಿ, ಮುತ್ತು,ರತ್ನ, ಬಂಗಾರದ ರಾಶಿಯೇ ಆಗಿದ್ದರೂ ಅಷ್ಟು ಆಶೆಯಾಗುತ್ತಿರಲಿಲ್ಲವೇನೋ? ಆದರೆ ನನಗೆ ಇಷ್ಟವಾಗುವ ಪುಸ್ತಕಗಳನ್ನ ಕೊಳ್ಳುವ ಹಣ ನನ್ನ ಬಳಿ ಇರಲಿಲ್ಲ. ವಾಪಸ್ಸು ಹೋಗಲು ಬಸ್ ಚಾರ್ಜಗೆ ಆಗುವಷ್ಟು , ಅದು ಬಿಟ್ಟರೆಹೊಟ್ಟೆ ಹಸಿದರೆ ಕಪ್ ಚಹಾ ಕುಡಿಯಲು ಬೇಕಾದಷ್ಟು ಹಣವೂ ಜೇಬಿನಲ್ಲಿರಲಿಲ್ಲ. ಬಡ ಮಗುವೊಂದು ಸಿಹಿ ತಿನಿಸಿನ ಅಂಗಡಿಯ ಡಬ್ಬಿಯಲ್ಲಿ ತಿನಿಸನ್ನು ಆಸೆಗಣ್ಣಿನಿಂದ ನೋಡಿದಂತೆ ನೋಡಿ, ಪುಟ ತಿರುವಿ, ಎಂದಾದರೂ ಕೊಳ್ಳೋಣ ಎಂದುಕೊಂಡು ಬಂದೆ.
ಸುಬ್ಬಣ್ಣ ಕಂಡವರು ‘ಎಲ್ಲೋಗಿದ್ರೀ’ ಎಂದು ಸಹಜವಾಗಿ ಕೇಳಿದರು. ಪ್ರಕಾಶನದ ಮಳಿಗೆಗೆ ಹೋಗಿದ್ದ ಬಗ್ಗೆ ಹೇಳಿದೆ. ‘ಪುಸ್ತಕಗಳ್ನ ಕೊಂಡ್ಕೊಂಡ್ರಾ?’ ಎಂದು ಪ್ರಶ್ನಿಸಿದಾಗ ಇಲ್ಲ ಎಂದವನು ಕೇಳಲೋ,ಬೇಡವೋ ಎಂದುಕೊಳ್ಳುತ್ತಲೇ ಮನಸ್ಸಿಗೆ ಬಂದ ಅನಿಸಿಕೆಯನ್ನ ಹೇಳಿದೆ. ‘ ಸುಬ್ಬಣ್ಣ, ನನ್ನ ಬಳಿ ದುಡ್ಡಿಲ್ಲ, ಆದರೆ ಪುಸ್ತಕ ತಗೋಬೇಕು ಅಂತ ಆಸೆ. ನಿಮ್ಮಲ್ಲಿ ಕಂತಿನ ಮೇಲೆ ಪುಸ್ತಕ ಕೊಡೋ ಸೌಲಭ್ಯವಿದೆಯಾ?’ ಅಂದೆ. ಸುಬ್ಬಣ್ಣ ಕವಳದ ಸಿದ್ಧತೆ ನಡೆಸುತ್ತಿದ್ದವರು ‘ ನಮ್ಮಲ್ಲಿ ಆ ರೀತಿ ಇಲ್ವಲ್ರೀ’ ಎಂದವರು ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ‘ ಒಂದ್ಕೆಲ್ಸ ಮಾಡಿ. ನಿಮಗೆ ಬೇಕಾದ ಪುಸ್ತಕ ಕೊಂಡಕೊಳ್ಳಿ. ಬಿಲ್ ನನ್ನ ಹೆಸರಿಗೆ ಬರೆಸಿ. ಆ ಹಣವನ್ನು ನಿಮಗೆ ಆದಾಗೆಲ್ಲ ಕೊಡಿ. ನಾನೇನೂ ಲೆಕ್ಕ ಇಡೋದಿಲ್ಲ. ನೀವೇ ನೆನಪಿಟ್ಟು ಕೊಡಬೇಕು. ಆದರೆ ಒಂದು ಮಾತು, ಆ ಹಣವನ್ನ ಕೊಡದೇ ಇರಬೇಡಿ’ ಅಂದವರು ಅಲ್ಲೇ ಇದ್ದ ಬಂಗಾರಿ ಎನ್ನುವ ಸಹಾಯಕನ ಬಳಿ ಅಕ್ಷರ ಪ್ರಕಾಶನದ ವ್ಯವಸ್ಥಾಪಕ -ಪ್ರಾಯಶ: ವಿಘ್ನೇಶ ಎಂದು ಹೆಸರು- ನಾನು ಕೇಳಿದ ಪುಸ್ತಕಗಳನ್ನ ಕೊಡುವಂತೆಯೂ, ಬಿಲ್ ತನ್ನ ಹೆಸರಿಗೆ ಬರೆದು ತನಗೆ ಕೊಡುವಂತೆಯೂ ತಿಳಿಸಿದರು. ನಾನು ಅವತ್ತು ಖರೀದಿಸಿದ್ದು ಒಂದು ಹೊರೆ ಪುಸ್ತಕ; ಪುಸ್ತಕ. ಶಿವರಾಮ ಕಾರಂತರ ಲೇಖನಗಳ ಕೃತಿಗಳು, ಅನಂತಮೂರ್ತಿಯವರ ಕಾದಂಬರಿಗಳು, ವೈದೇಹಿ ಕೃತಿಗಳು, ಸುಬ್ಬಣ್ಣ, ಬಿ.ವಿ.ಕಾರಂತ ಮುಂತಾದವರ ನಾಟಕ ಕೃತಿಗಳು ಮುಂತಾಗಿ ಎನಿಲ್ಲವೆಂದರೂ 40-50 ಪುಸ್ತಕಗಳು. ಅವನ್ನೆಲ್ಲ ಪ್ಯಾಕ್ ಮಾಡಿಸಿ ಅಕ್ಷರಶ: ತಲೆ ಮೇಲೆ ಹೊತ್ತುಕೊಂಡೇ ಬಂದೆ. ಮನೆಯಲ್ಲಿ ನೋಡಿದ ಅಪ್ಪ-ಅಮ್ಮ ‘ಆಯ್ತು ಬಿಡು, ಇನ್ನು ಮಾತಾಡುವ ಕೆಲಸವೂ ಇಲ್ಲ’ ಎಂದು ಜೋಕ್ ಮಾಡಿದರು.
ಇವತ್ತು ನನ್ನ ಬಳಿ ಕನಿಷ್ಠವೆಂದರೂ ಸಾವಿರಕ್ಕಿಂತ ಹೆಚ್ಚು ಪುಸ್ತಕಗಳಿವೆ. ಮನೆ ಕಟ್ಟುವಾಗ ಲೈಬ್ರರಿಗಾಗೇ ಮಹಡಿ ಮೇಲೆ ಕೊಠಡಿ ಕಟ್ಟಿಸಿ ಸ್ವಂತ ವಾಚನಾಲಯ ರೂಪಿಸಿದ್ದೇನೆ. ಅನೇಕರು ಓದಲು ಕೇಳಿ ಪಡೆದು ವಾಪಸ್ಸು ಕೊಡದೇ ಇದ್ದರೂ, ಲೈಬ್ರರಿಗೆ ಹೊಸದಾಗಿ ಪುಸ್ತಕಗಳು ಸೇರುತ್ತಲೇ ಇವೆ. ಇವತ್ತಿಗೂ ಅಲ್ಲಿ ಕುಳಿತು ಓದುವಾಗೆಲ್ಲ ಮೊಟ್ಟಮೊದಲ ಬಾರಿಗೆ ಪುಸ್ತಕಗಳನ್ನು ಕೊಟ್ಟು, ಓದಿನ ಅಭಿರುಚಿಯನ್ನ ಹೆಚ್ಚಿಸಿದ ಸುಬ್ಬಣ್ಣ ನೆನಪಾಗುತ್ತಾರೆ. ನನ್ನಬಳಿ ಎಷ್ಟೇ ಬೇರೆ ಪುಸ್ತಕಗಳಿದ್ದರೂ ಆ ಪುಸ್ತಕಗಳ ಮೇಲಿನ ಪ್ರೀತಿ ಸ್ವಂತದ್ದು. ಸುಬ್ಬಣ್ಣನ ಮಾತಿನಂತೆ ಆದಾಗೆಲ್ಲ ಅಷ್ಟಿಷ್ಟು ಎಂದು ಆ ಪುಸ್ತಕಗಳ ಹಣವನ್ನು ಸಂದಾಯ ಮಾಡಿ ಬರೆದಿಟ್ಟುಕೊಳ್ಳುತ್ತಿದ್ದೆ. ಬಾಕಿ ಮುಗಿದಾಗ ಅವರಿಗೆ ಹೇಳಿದೆ. ಅಭಿರುಚಿಗೆ ಪ್ರೋತ್ಸಾಹಿಸಿದ, ಒಳಗಿನ ಚೈತನ್ಯ ಮತ್ತಷ್ಟು ಹಿಗ್ಗಲು ನೆರವಾದ ಸುಬ್ಬಣ್ಣನವರ ಬಗ್ಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.
ಒಮ್ಮೆ ಸುಬ್ಬಣ್ಣನವರ ಸಂಚಿಯಲ್ಲಿ ವೀಳ್ಯದೆಲೆ ಖಾಲಿಯಾಗಿಬಿಟ್ಟಿತ್ತು. ಬಂಗಾರಿಯನ್ನು ಕರೆದು ಯಾವುದಾದರೂ ಅಂಗಡಿಯಿಂದ ತೆಗೆದುಕೊಂಡು ಬಾ ಎಂದರು. ಆತ ಎಲ್ಲಿ ಸುತ್ತಾಡಿದರೂ ಅವರು ಬಳಸುವ ಕಪ್ಪು ಲಕ್ಕವಳ್ಳಿ ಎನ್ನುವ ತಳಿಯ ವೀಳ್ಯದೆಲೆ ಸಿಗಲೇ ಇಲ್ಲ. ಬಹುತೇಕ ಸಾಗರದ ಕಡೆ ಇದೇ ವೀಳ್ಯದೆಲೆ ಹೆಚ್ಚು ಬಳಸುತ್ತಾರಾದರೂ ಅವತ್ತು ಇರಲಿಲ್ಲ. ಅಂತೂ ಪೇಚಾಡಿಕೊಳ್ಳುತ್ತಲೇ ಸುಬ್ಬಣ್ಣ ಕವಳದ ಸಂಚಿ ಇದ್ದ ಬೇರೆ ಯಾರಿಂದಲೋ ಪಡೆದುಕೊಳ್ಳಬೇಕಾಯ್ತು. ನಮ್ಮ ತೋಟದಲ್ಲಿ ಕಪ್ಪು ಲಕ್ಕವಳ್ಳಿ ಎರಡು ಬಳ್ಳಿಗಳಿದ್ದವು. ಅದರ ತುಂಬಾ ಎಲೆಗಳು. ಅಮ್ಮ ಕವಳ ಹಾಕುತ್ತಿದ್ದವಳಾದರೂ ಅವಳಿಗೆ ಆ ಎಲೆ ಇಷ್ಟದ್ದಲ್ಲ. ಅದಕ್ಕೆ ಯಾರಾದರೂ ಬೇಕಾದವರು ಕೊಯ್ಯೋದು ಬಿಟ್ಟರೆ ಹಾಗೇ ಇರುತ್ತಿದ್ದವು. ಮಾರನೇ ಸಾರಿ ಹೆಗ್ಗೋಡಿಗೆ ಹೋಗುವಾಗ ಒಂದಿಷ್ಟು ಆ ವೀಳ್ಯದೆಲೆ ಕೊಯ್ದು ತೆಗೆದುಕೊಂಡು ಹೋಗಿ ಸುಬ್ಬಣ್ಣನವರಿಗೆ ಕೊಟ್ಟೆ. ನಾನೆಲ್ಲೋ ಅಂಗಡಿಯಿಂದ ತಂದಿರಬಹುದು ಎಂದು ಊಹಿಸಿಕೊಂಡರೇನೋ? ‘ಇದ್ಯಾಕೆ ತಂದ್ರೀ’ ಎಂದರು. ‘ನಮ್ಮ ತೋಟದ್ದೇ’ ಎಂದಾಗ ಖುಷಿಯಿಂದ ಪಡೆದುಕೊಂಡು ಆ ಬಗ್ಗೆ ಎಲ್ಲ ಕೇಳಿದ್ದರು. ಮರು ಬಾರಿ ಹೋದಾಗ ಅವರಾಗೇ ‘ಎಲೆ ತಂದ್ರೇನ್ರಿ’ ಎನ್ನಬೇಕೆ. ತಮಗೆ ತುಂಬ ರುಚಿಕೊಟ್ಟ ಆ ಎಲೆಗಳ ಬಗ್ಗೆ ಒಂದಷ್ಟು ಹೊಗಳಿದರು. ಅಷ್ಟರ ನಂತರ ಹೋಗುವಾಗೆಲ್ಲ ಒಂದೆರಡು ಕಟ್ಟು- ಒಂದು ಕಟ್ಟಲ್ಲಿ ಕನಿಷ್ಠ ನೂರು ಎಲೆಗಳು- ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಸುಬ್ಬಣ್ಣ ಯಾವ ದೇಶಾವರಿತನವಿಲ್ಲದೇ – ಅಂದರೆ ಮೇಲ್ನೋಟದ ದಾಕ್ಷಿಣ್ಯ- ಅವನ್ನ ಸಂಚಿಗೆ ಸೇರಿಸುತ್ತಿದ್ದರು. ಕೆಲವೊಮ್ಮೆ ನನ್ನ ಮುಖ ಕಾಣುತ್ತಿದ್ದಂತೇ ‘ ವೀಳ್ಯದೆಲೆ ತಂದ್ರೇನ್ರಿ, ಖರ್ಚಾಗ್ತಾ ಬಂದಿತ್ತು’ ಎನ್ನುತ್ತಿದ್ದರು. ಸಹಜತೆ, ಸರಳತೆ, ಸ್ನೇಹಪರತೆ, ಅಭಿಪ್ರಾಯಗಳನ್ನು ನಿರ್ಧಾಕ್ಷಿಣ್ಯವಾಗಿ, ನಿರ್ವಂಚನೆಯಿಂದ ಹೇಳುವ ಗುಣ ಅವರದ್ದಾಗಿತ್ತು. ಅದರಲ್ಲಿ ದೂಳಿನ ಕಣದಷ್ಟನ್ನಾದರೂ ನಾನು ಪಡೆದಿದ್ದರೆ ಧನ್ಯನಾಗುತ್ತಿದ್ದೆ. ಆ ಅದೃಷ್ಟ ಇರಬೇಕಲ್ಲ?
ಗಂಗಾಧರ ಕೊಳಗಿ