ಆದ್ಯೋತ್ ಸುದ್ದಿನಿಧಿ:
ವಿಶ್ವಶಾಂತಿಗೆ ಎಂಟು ಪ್ರತ್ಯೇಕ ಯಕ್ಷ ನೃತ್ಯ ರೂಪಕಗಳನ್ನು ನೀಡುತ್ತಿರುವ ಶಿರಸಿ ಬೆಟ್ಟಕೊಪ್ಪದ ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ ಪ್ರಕಟವಾಗಿದೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಎಂಟು ಪ್ರತ್ಯೇಕ ವಿಭಾಗದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ನೀಡಲಾಗುವ ಪ್ರಶಸ್ತಿ ಇದಾಗಿದೆ. ಧಾರವಾಡದಲ್ಲಿ ಮಾ.೨೭ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನ ಕ್ಷೇತ್ರದಲ್ಲಿ ಗುರುತಾದ ತುಳಸಿ ಹೆಗಡೆ, ಪ್ರಸ್ತುತ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯಲ್ಲಿ ಎಂಟನೇ ವರ್ಗ ಓದುತ್ತಿದ್ದಾಳೆ.
ಶಿರಸಿ ತಾಲೂಕಿನ ಬೆಟ್ಟಕೊಪ್ಪದ ತುಳಸಿ, ಈಗಾಗಲೇ ರಾಜ್ಯ, ರಾಷ್ಟ್ರದ ಮಟ್ಟದ ಅನೇಕ ವೇದಿಕೆಗಳಲ್ಲಿ ವಿಶ್ವಶಾಂತಿ ಸರಣಿ ಯಕ್ಷ ನೃತ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾಳೆ. ಕಳೆದ ವರ್ಷ ಇಂಡಿಯಾ ಬುಕ್ ಆಫ್ ರೆಕಾರ್ಡ ಹಾಗೂ ಇಂಟರನ್ಯಾಶನಲ್ ಬುಕ್ ಆಫ್ ರೆಕಾರ್ಡ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳೂ ಈಕೆಗೆ ಸಂದಿವೆ ಎಂಬುದು ಉಲ್ಲೇಖನೀಯ.
