ಆದ್ಯೋತ್ ಸುದ್ದಿನಿಧಿ:
ಹುಬ್ಬಳ್ಳಿಯಲ್ಲಿ ರಾಮ ಭಕ್ತರ ಬಂಧನ ಖಂಡಿಸಿ ಶಿರಸಿಯ ಡಿವೈಎಸ್ಪಿ ಕಚೇರಿಯ ಆವರಣದಲ್ಲಿ ಬಿಜೆಪಿ, ಹಿಂದೂ ಜಾಗರಣಾ ವೇದಿಕೆ ಹಾಗೂ ವಿಚಾರ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರಾಮ ಭಕ್ತರ ಬಂಧನವನ್ನು ಖಂಡಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ ಮಾತನಾಡಿ, ರಾಮ ಭಕ್ತರ ವಿರುದ್ಧ ಕಾಂಗ್ರೆಸ್ ಸರ್ಕಾರ ತನ್ನ ಧೋರಣೆ ಹೀಗೆ ಮುಂದುವರೆಸಿದರೆ ಹಿಂದೂ ಸಮಾಜ ತಕ್ಕ ಪಾಠ ಕಲಿಸುತ್ತದೆ. ಪೊಳ್ಳು ಪ್ರಕರಣ ದಾಖಲಿಸಿ, ಬಂಧನದ ಮೂಲಕ ಹಿಂದೂ ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ಯಶಸ್ವಿ ಆಗಲಾರದು ಎಂಬುದು ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ತಿಳಿದಿರಲಿ ಎಂದರು.
ಹಿಂದೂ ಜಾಗರಣಾ ವೇದಿಕೆಯ ಶಿರಸಿ ಜಿಲ್ಲಾ ಸಂಚಾಲಕ ಹರೀಶ ಕರ್ಕಿ ಮಾತನಾಡಿ ಇಡೀ ರಾಷ್ಟ್ರ ಅಯೋಧ್ಯೆಯಲ್ಲಿ ರಾಮಲಲಾ ಪ್ರತಿಷ್ಠಾಪನೆ ಎದುರು ನೋಡುತ್ತಿದ್ದರೆ, ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಬಂಧನ ದುರದೃಷ್ಟಕರ ಕಾಂಗ್ರೆಸ್ ಸರ್ಕಾರ ರಾಮ ಭಕ್ತರ ಬಂಧನವನ್ನು ಕೂಡಲೇ ಕೈಬಿಡಲಿ, ಇಲ್ಲವೇ ಪರಿಣಾಮ ಎದುರಿಸಬೇಕಾಗುತ್ತದೆ, ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಉಷಾ ಹೆಗಡೆ, ಭಜರಂಗದಳ ಸಂಚಾಲಕ ಅಮಿತ್ ಶೇಟ್, ಮಧುಸೂದನ ಕಿರುಗಾರ, ಶ್ರೀಧರ ಹಿರೇಹದ್ದ, ನಗರ ಸಭಾ ಸದಸ್ಯರಾದ ಗಣಪತಿ ನಾಯ್ಕ, ವೀಣಾ ಶೆಟ್ಟಿ, ನಂದನ ಸಾಗರ ಹಾಗೂ ವಿಚಾರ ಪರಿವಾರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
######
ಸುಪ್ರೀಂ ಕೋರ್ಟಿನಲ್ಲಿ ಬಾಬರಿ ಮಸೀದಿ ಪರ ವಕಾಲತ್ತು ವಹಿಸಿ ತೊಂದರೆ ಕೊಟ್ಟಿದ್ದು ಕಾಂಗ್ರೆಸ್. ಈಗ ರಾಮಲಲ್ಲಾ ಪ್ರತಿಷ್ಠಾಪನೆ ಸುಸಂದರ್ಭದಲ್ಲಿ ರಾಮ ಭಕ್ತರ ಬಂಧನವನ್ನು ಮಾಡುತ್ತಿರುವುದೂ ಸಹ ಕಾಂಗ್ರೆಸ್ ಸರಕಾರ. ಗುಲಾಮಿ ಮಾನಸಿಕತೆಯ ಕಾಂಗ್ರೆಸ್ ನಾಯಕರಿಂದ ಬೇರೆ ಹೇಳಿಕೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಹಿಂದೂ ಸಮಾಜ ರಾಮ ಮಂದಿರ ನಿರ್ಮಾಣಕ್ಕೆ ಐದು ನೂರು ವರ್ಷಗಳ ಕಾಲ ಕಾತರದಿಂದ ಕಾದಿದೆ, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ದಶಕಗಳ ಕಾಲ ರಾಮ ಮಂದಿರಕ್ಕಾಗಿ ಹೋರಾಡಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಜನ ನೋಡಿ ರೋಸಿ ಹೋಗಿದ್ದಾರೆ. ಬಹುಸಂಖ್ಯಾತ ಹಿಂದೂ ಸಮಾಜ ಜಾಗೃತಗೊಂಡಿದೆ, ತುಷ್ಟೀಕರಣದ ತೆವಲಿಗೆ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ಸಿಗೆ ಹಿಂದೂ ಸಮಾಜ ತಕ್ಕ ಪಾಠ ಕಲಿಸುತ್ತದೆ
ಗುರುಪ್ರಸಾದ ಹೆಗಡೆ ಹರ್ತೆಬೈಲ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ,
ಬಿಜೆಪಿ ಉತ್ತರ ಕನ್ನಡ.