ಸಿದ್ದಾಪುರ ಬಾನ್ಕುಳಿ ಗೋಸ್ವರ್ಗದ ಶಂಕರಪಂಚಮಿ ಉತ್ಸವದಲ್ಲಿ ಶ್ರೀ ಮಹಾಪಾದುಕಾ ಪೂಜೆ


ಆದ್ಯೋತ್ ಸುದ್ದಿನಿಧಿ:
ಆದಿಗುರು ಶಂಕರರು ಮಾಡಿದ ಸತ್ಕಾರ್ಯದಿಂದ ದೊಡ್ಡವರಲ್ಲಿ ದೊಡ್ಡವರು ಎನಿಸಿಕೊಂಡವರು.ಗುರು ಎನ್ನುವ ಶಬ್ದಕ್ಕೆ ದೊಡ್ಡದು ಎಂಬ ಅರ್ಥವಿದೆ ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಭಾನ್ಕುಳಿ ಗೋಸ್ವರ್ಗದ ಶಂಕರಪಂಚಮಿ ಉತ್ಸವದಲ್ಲಿ ಸ್ವರ್ಣಮಂಟಪಾಲಂಕೃತ ಶ್ರೀಕರಾರ್ಚಿತ ಪೂಜೆ, ಸ್ವರ್ಣಭಿಕ್ಷೆ, ಸಂಧ್ಯಾಮಂಗಲ ಕಾರ್ಯಕ್ರಮಗಳ ನಂತರ ಕೃಷಿಕರ ಸಂಕಷ್ಟ ನಿವಾರಣಾರ್ಥವಾಗಿ ಅದ್ವೈತ ರಥದಲ್ಲಿ ಹವ್ಯಕ ಮಹಾಮಂಡಲ ವ್ಯಾಪ್ತಿಯನ್ನು ಸಂಚರಿಸಿ ಬಂದ ಶ್ರೀ ಮಹಾಪಾದುಕೆಗೆ ಮಹಾಪೂಜೆ ನೆರವೇರಿಸುವ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.

ನಾವೆಲ್ಲ ಸೇರಿ ವಂದೇ ಗುರೂಣಾಂ ಎಂದು ಗುರುವಂದನೆ ಮಾಡುತ್ತೇವೆ. ಇದು ಶಂಕರರು ತಮ್ಮ ಗುರುವಿಗೆ ಮಾಡಿದ ಗುರುವಂದನೆ. ಜಗದ್ಗುರುವಾದ ಶಂಕರರು ಗುರುಗಳಲ್ಲೇ ದೊಡ್ಡವರು.ಶಂಕರಾಚಾರ್ಯರು ಮೂರು ಸಲ ಕಾಲ್ನಡಿಗೆಯಲ್ಲಿ ದೇಶವನ್ನು ಸುತ್ತಿದವರು. ಅವರು ಪಾದ ಬೆಳೆಸಿದಾಗ ಭೂಖಂಡ, ಭೂಮಂಡಲವೇ ಚಿಕ್ಕದಾಯಿತು. ದೇಶ ಸಂಚಾರದಿಂದಲೇ ಅವರು ಭಗವತ್ಪಾದ ಎನಿಸಿಕೊಂಡವರು.

ಅಂದು ಅವರು ಮಾಡಿದ ಕಾರ್ಯ ಪ್ರಪಂಚವನ್ನೇ ವ್ಯಾಪಿಸಿತು. ಸನಾತನ ಧರ್ಮ ರಕ್ಷಣೆಗಾಗಿ ಅವರು ಮಾಡಿದ ಮಹಾನ್ ಕಾರ್ಯ ಇಂದಿಗೂ ಜಾಗೃತವಾಗಿದೆ, ಸಚೇತನವಾಗಿದೆ. ಶಂಕರರ ಪರಂಪರೆಯಲ್ಲಿ ಕೋಟ್ಯಾಂತರ ಸನ್ಯಾಸಿಗಳು ಆಗಿ ಹೋಗಿದ್ದಾರೆ, ಈಗಲೂ ಲಕ್ಷೋಪಲಕ್ಷ ಸನ್ಯಾಸಿಗಳಿದ್ದಾರೆ. ಸಹಸ್ರ ಸಹಸ್ರ ವರ್ಷಗಳ ನಂತರವೂ ಶಂಕರಾಚಾರ್ಯರು ಮಾಡಿದ ಕಾರ್ಯ ಶಾಶ್ವತವಾಗಿದೆ.

ಇಂತಹ ಮಹಾಗುರುವಿಗೆ ಸಾವಿರಕ್ಕೂ ಅಧಿಕ ಸುವಸ್ತುಗಳ ನೈವೇದ್ಯ, ಮಹಾಪೂಜೆ ಸಲ್ಲುತ್ತಿದೆ. ನಮ್ಮ ದೃಷ್ಟಿಯಿಂದ ಇದು ಮಹಾಪೂಜೆ. ಆದರೆ ಗುರುವಿನ ದೃಷ್ಟಿಯಲ್ಲಿ ಇದೊಂದು ಬಿಂದು ಮಾತ್ರ. ಸೌಂದರ್ಯ ಲಹರಿಯಲ್ಲಿ ಅವರು ಗುರುಪೂಜೆಯನ್ನು, ಗುರುವಂದನೆಯನ್ನು ಸೂರ್ಯನಿಗೆ ಆರತಿ ಎತ್ತಿದ ಹಾಗೆ, ಸಮುದ್ರದ ನೀರನ್ನೇ ತೆಗೆದು ಅರ್ಘ್ಯ ನೀಡಿದ ಹಾಗೆ ಎಂದಿದ್ದಾರೆ. ಭಾಗೀರಥಿ ಮನೆಗೆ ಬಂದು ತಲುಪಿದಾಗ ನಾವು ಮನೆಗೆ ಬೀಗ ಹಾಕಬಾರದಂತೆ. ವಿಸ್ತಾರವಾಗಿ ನಡೆಯುವ ಪೂಜೆಯಲ್ಲಿ ಭಾವದಲ್ಲಿ ನಿಮ್ಮ ಮನಸ್ಸನ್ನು ಮಗ್ನವಾಗಿಸಿ. ಭಕ್ತಿ ಭಾವದಲ್ಲಿ ಮುಳುಗಿ ಪೂಜೆಯನ್ನು ಆಸ್ವಾದಿಸಿ. ಭಾವಕ್ಕೆ-ಭಕ್ತಿಗೆ-ಏಕಾಗ್ರತೆಗೆ-ಸಮರ್ಪಣೆಗೆ ಅವಕಾಶ ಮಾಡಿಕೊಳ್ಳಿ ಎಂದು ಶ್ರೀಗಳು ಹೇಳಿದರು.


About the author

Adyot

Leave a Comment