ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಭಾನ್ಕುಳಿ ಮಠದ ಗೋಸ್ವರ್ಗದಲ್ಲಿ ನಡೆಯುತ್ತಿರುವ ಶಂಕರಪಂಚಮಿ ಉತ್ಸವದಲ್ಲಿ ಕಾಮಧೇನು ಹವನ,ಮಾತೃತ್ವಮ್ ಸಮಾವೇಶ, ದಾನ-ಮಾನ, ಲಕ್ಷ ಭಾಗಿನಿಯರಿಗೆ ಆಶೀರ್ವಾದ, ಗೋಸೇವಕರಿಗೆ “ಗೋಪಾಲ ಗೌರವ” ಪ್ರದಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯಸಾನ್ನಿದ್ಯವಹಿಸಿದ್ದ ಶ್ರೀ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀಸ್ವಾಮೀಜಿ ಆಶೀರ್ವಚನ ನೀಡಿ,ಇಂದು ಪಶ್ಚಿಮದ ಗಾಳಿ ಎಲ್ಲೆಡೆ ಬೀಸುತ್ತಿದ್ದು ಇದು ನಮಗೆಲ್ಲ ಎಚ್ಚರಿಕೆಯ ಕರೆಗಂಟೆಯಾಗಿದೆ. ಅಂದು ಧರ್ಮಕ್ಕೆ ಗ್ಲಾನಿಯಾಗುತ್ತಿದ್ದ ಸಂದರ್ಭದಲ್ಲಿ ಅವತಾರವನ್ನೆತ್ತಿ ದೇಶ ಮತ್ತು ಅದರ ಆತ್ಮವನ್ನು ಕಾಪಾಡಿದವರು ಶಂಕರಾಚಾರ್ಯರು.
ಆದಿಗುರು ಶಂಕರಾಚಾರ್ಯರು ಇಡೀ ಭಾರತದಾದ್ಯಂತ ಸಂಚರಿಸಿದ್ದು ಅವರಿಟ್ಟ ಒಂದೊಂದು ಹೆಜ್ಜೆಯೂ ಒಂದೊಂದು ಕ್ಷೇತ್ರವಾಗಿದೆ. ಅವರ ಪ್ರಸ್ತಾನತ್ರಯ ಭಾಷ್ಯ ಅವರನ್ನು ಮಹಾದಾರ್ಶನಿಕರನ್ನಾಗಿ ಗುರುತಿಸುವಂತೆ ಮಾಡಿದೆ. ಕೆಡುಕುಗಳನ್ನೆಲ್ಲಾ ಕಳೆದುಕೊಳ್ಳುವ ಒಳಿತುಗಳನ್ನು ಸ್ವೀಕರಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು. ನಾವೆಲ್ಲ ಶುಭಂಕರರಾಗಬೇಕು. ಸ್ವಾರ್ಥ ನಮ್ಮೊಳಗೆ ಹೊಕ್ಕಾಗ ತಪ್ಪು, ಹಿಂಸೆ, ಯುದ್ಧ ಪ್ರಾರಂಭವಾಗುತ್ತದೆ. ನಮ್ಮ ಸುಖಕ್ಕಾಗಿ ಮತ್ತೊಬ್ಬರ ಬದುಕನ್ನು ಹಾಳುಗೆಡವಬಾರದು. ಯಾರಲ್ಲಿ ಸಂಪತ್ತಿದೆಯೋ ಅವರು ಗರ್ವದಿಂದ ತಲೆಯೆತ್ತಿ ಓಡಾಡುವುದಲ್ಲ. ಮಹಾಲಕ್ಷ್ಮಿಯಂತೆ ವಿನಯದಿಂದ ತಲೆ ತಗ್ಗಿಸಬೇಕು ಎಂದು ಹೇಳಿದರು.
ಇಂದು ಮಣ್ಣು ಎಂದರೆ ಕೊಳಕು ಎಂದು ಪರಿಗ್ರಹಿಸುವಂತಾಗಿದೆ. ಆದರೆ ಹಿಂದಿನವರು ಮಣ್ಣನ್ನು ಎಲ್ಲ ಜೀವಗಳ ತಾಯಿ ಎಂದು ಪರಿಗಣಿಸುತ್ತಿದ್ದರು. ಇಂದಿಗೂ ಮರಣ ಹೊಂದುತ್ತಿರುವವರನ್ನು ಪಲ್ಲಂಗದಿAದ ಇಳಿಸಿ ನೆಲದ ಮೇಲೆ ಮಲಗಿಸುತ್ತಾರೆ. ಏಕೆಂದರೆ ಆಗ ಭೂಮಿತಾಯಿ ಆತನ ಪಾಪದಲ್ಲಿಯ ಕೆಲವು ಅಂಶ ತಾನು ಪಡೆಯುತ್ತಾಳಂತೆ. ಇಂತಹ ಭೂಮಿಯನ್ನು ನಾವು ಕೊಳಕು ಎನ್ನುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.
ಆಕಾಶ, ನೀರು, ಗಾಳಿ ಎಲ್ಲವೂ ಶುದ್ಧ ಮಾಡುವ ಗುಣ ಹೊಂದಿವೆ. ಅಂತೆಯೇ ಗೋವಿನ ತ್ಯಾಜ್ಯವೂ ಪವಿತ್ರ. ನಮ್ಮ ಚರ್ಮದಿಂದ ಅಸ್ತಿಯವರೆಗೆ ಎಲ್ಲವನ್ನೂ ಗೋಮಯ-ಪಂಚಗವ್ಯ ಶುದ್ಧಗೊಳಿಸುತ್ತದೆ. ಕೆಲವರು ಕೊಳಕು ಎಂದು ಪರಿಗಣಿಸುವ ಗೋಮಯವನ್ನು ಮುಟ್ಟಿ-ತಟ್ಟಿ ಮಾತೆಯರು ೧೪ ಸಾವಿರಕ್ಕೂ ಮಿಕ್ಕಿ ಬೆರಣಿಯನ್ನು ಸಿದ್ಧಪಡಿಸಿದ್ದಾರೆ. ಇದೇ ಮಾತೆಯರು ಗೋವನ್ನು ಸಲಹಲು ಮಠಕ್ಕಾಗಿ ಯಾಚನೆ ಮಾಡಿದ್ದಾರೆ. ಅಂತವರಿಗೆ ಸ್ವಂತಕ್ಕಾಗಿ ಬೇಡುವ ಪರೀಸ್ಥಿತಿ ಎಂದಿಗೂ ಬರುವುದಿಲ್ಲ ಗೋವಿನ ಸೇವೆಯಲ್ಲಿ ನಿರತರಾದ ನಾಡಿನ ನಾಲ್ವರಿಗೆ ಗೋಪಾಲ ಗೌರವ ಪ್ರದಾನ ಮಾಡಲಾಗಿದೆ. ಅವರಿಂದ ಮತ್ತಷ್ಟು ಸಮಾಜಮುಖಿಯಾದ ಕಾರ್ಯ ನಡೆಯಲೆಂಬ ಆಶಯ ವ್ಯಕ್ತಪಡಿಸುತ್ತೇವೆ. ಶಂಕರರ, ಗೋಮಾತೆಯ ಸೇವೆಯಲ್ಲಿ ನಿರತರಾದವರಿಗೂ, ಸಕಲ ಶಿಷ್ಯಭಕ್ತರಿಗೂ ಒಳಿತಾಗಲೆಂದು ಹಾರೈಸುತ್ತೇವೆ ಎಂದು ಅನುಗ್ರಹಿಸಿದರು.
ಗೋಪಾಲ ಗೌರವ ಪ್ರಶಸ್ತಿಯ ಸಹಭಾಗಿತ್ವ ವಹಿಸಿದ ಉದ್ಯಮಿ ದಿನೇಶ ಶಹರಾ ಮಾತನಾಡಿ, ಕಳೆದ ಒಂದು ದಶಕದಿಂದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಸಂಪರ್ಕದಲ್ಲಿರುವೆ. ನಾನು ಎಷ್ಟೊಂದು ಉದ್ಯಮ, ವ್ಯವಹಾರ ನಡೆಸಿದರೂ ಮಾನಸಿಕ ನೆಮ್ಮದಿ, ಸಮಾಧಾನ, ಸಂತಸವಿರಲಿಲ್ಲ.ಆದರೆ ರಾಘವೇಶ್ವರಶ್ರೀಗಳವರ ಆಶೀರ್ವಾದ ಬಲದಿಂದ ನನ್ನಲ್ಲಿ ಜೀವನೋತ್ಸಾಹ ಇಮ್ಮಡಿಸಿದೆ. ಅವರ ಧೀ:ಶಕ್ತಿ ನಮ್ಮಂತವರನ್ನು ಕಾಪಾಡುತ್ತಿದೆ. ನನ್ನಲ್ಲಾ ಕೆಲಸಗಳಲ್ಲಿ ಸಫಲತೆ ದೊರೆಯುತ್ತಿದೆ. ಇದೀಗ ನಾನು ಶ್ರೀಗಳ ಪ್ರಭಾವದಿಂದಾಗಿ ಸನಾತನ ಧರ್ಮದತ್ತ ಹೊರಳಿದ್ದು ವಸುದೈವ ಕುಟುಂಬಕಂ
ಮಂತ್ರವನ್ನು ಜಪಿಸಿ ಅನುಷ್ಠಾನಕ್ಕೆ ತರುತ್ತಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಅ.ಪು.ನಾರಾಯಣಪ್ಪ, ಶ್ರೀ ರಾಮದೇವಮಠ, ಗೋಸ್ವರ್ಗ, ಮಹಾಮಂಡಲ, ಶಂಕರ ಪಂಚಮೀ ಉತ್ಸವ ಸಮಿತಿ ಪದಾಧಿಕಾರಿಗಳಾದ ಜಿ.ಕೆ.ಹೆಗಡೆ ಗೋಳಗೋಡ, ಆರ್.ಎಸ್.ಹೆಗಡೆ ಹರಗಿ, ಡಾ.ವೈ.ವಿ.ಕೃಷ್ಣಮೂರ್ತಿ, ಎಂ.ಎಂ.ಹೆಗಡೆ ಮಗೇಗಾರ, ಎಂ.ಜಿ.ರಾಮಚAದ್ರ ಮರ್ಡುಮನೆ, ರಮಾನಂದ ತಲವಾಟ, ಎಂ.ವಿ.ಹೆಗಡೆ ಮುತ್ತಿಗೆ, ಜಿ.ಎಸ್.ಭಟ್ಟ ಕಲ್ಲಾಳ, ವೀಣಾ ಭಟ್ಟ ಶಿರಸಿ, ಮಹೇಶ ಚಟ್ನಳ್ಳಿ ಸೇರಿದಂತೆ ಹೆಚ್ಚಿನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.