ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಶಿರಸಿಯಲ್ಲಿ ಗೋ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದು ಕಳೆದ ಎರಡು ದಿನಗಳಲ್ಲಿ ಒಟ್ಟೂ ನಾಲ್ಕು ಗೋವುಗಳನ್ನು ಕಳ್ಳತನ ಮಾಡಲಾಗಿದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಜಿಲ್ಲಾ ಬಿಜೆಪಿ ಪ್ರದಾನಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಆರೋಪಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಶಿರಸಿಯ ಕೆ.ಎಚ್.ಬಿ ಕಾಲನಿ – ವಿವೇಕಾನಂದ ನಗರದಲ್ಲಿ ಮೇ 25ರ ರಾತ್ರಿ ಕೆಂಪು ಬಣ್ಣದ ಸ್ಕಾರ್ಪಿಯೋ ವಾಹನ ತಂದು ಆಕಳನ್ನು ತುಂಬಿಕೊಂಡು ಹೋಗಿದ್ದಾರೆ ಹಾಗೂ ಮೇ 26ರ ರಾತ್ರಿ ಇಸಳೂರಿನ ರೈತ ಸುಭಾಷ್ ರೆಡ್ಡಿ ಎಂಬುವರ ಮನೆಯ ಕೊಟ್ಟಿಗೆಯಿಂದ 3 ಆಕಳನ್ನು ಕದ್ದೊಯ್ದಿದ್ದಾರೆ. ಮನೆಯಲ್ಲಿ ಕಟ್ಟಿ ಸಾಕಿದ ಗೋವು ಸುರಕ್ಷಿತವಲ್ಲ ಎಂದರೆ ಸಾರ್ವಜನಿಕರು ಯಾವ ವ್ಯವಸ್ಥೆಯ ಮೇಲೆ ಭರವಸೆ ಇರಿಸಬೇಕು.ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಿಂದ ಈ ಹಿಂದಿನ ಘಟನಾವಳಿಗಳ ಸಂದರ್ಭದಲ್ಲಿಯೂ ಹೋರಾಟ ನಡೆಸಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ. ಪೊಲೀಸ್ ಇಲಾಖೆಗೂ ಮಾತನಾಡಿ ಮಾಹಿತಿ ನೀಡುವ ಕೆಲಸ ಆಗಿದೆ, ಆದರೂ ಗೋಕಳ್ಳರು ಯಾವ ಕಾನೂನಿನ ಭಯವೂ ಇಲ್ಲದೆ ತಮ್ಮ ದುಷ್ಕೃತ್ಯವನ್ನು ಮುಂದುವರೆಸಿದ್ದಾರೆ. ಪೊಲೀಸ್ ಇಲಾಖೆಯು ಗೋಮಾಂಸ ಮಾರಾಟ ಜಾಲದ ಹಾಗೂ ಗೋಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳನ್ನು, ಸಮಾಜಘಾತುಕ ಶಕ್ತಿಗಳು ಎಂದು ಪರಿಗಣಿಸಬೇಕು ಎಂದು ಗುರುಪ್ರಸಾದ ಹೆಗಡೆ ಆಗ್ರಹಿಸಿದ್ದಾರೆ