ಆದ್ಯೋತ್ ಸುದ್ದಿನಿಧಿ:
ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ನೌಕರರಿಗೆ ನೀಡುವ ಏಪ್ರಿಲ್ 1 ವಿರಾಮದ ದಿನವನ್ನು ರದ್ದು ಪಡಿಸುವಂತೆ ನೌಕರರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಮನವಿಯನ್ನು ಪುರಸ್ಕರಿಸದ ಸರಕಾರ ಏ.1 ನ್ನು ವಿರಾಮದ ದಿನ ಎಂದು ಘೋಷಿಸಿತ್ತು ಇದನ್ನು ಖಂಡಿಸಿರುವ ಗುತ್ತಿಗೆ ನೌಕರರು ಈ ದಿನವನ್ನು ಶೋಷಣೆಯ ದಿನ ಎಂದು ಘೋಷಿಸಿ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಹೆಚ್.ವೈ., ಏಪ್ರಿಲ್-1ನ್ನು ವಿರಾಮದ ದಿನ ಎಂದು ಘೋಷಿಸುವುದನ್ನು ಕೈಬಿಡಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರಕಾರ ಸ್ಪಂದಿಸಿಲ್ಲ ಆದ್ದರಿಂದ ರಾಜ್ಯಾದ್ಯಂತ ಈ ದಿನವನ್ನು ಶೋಷಣೆಯ ದಿನವನ್ನಾಗಿ ಆಚರಿಸುತ್ತಿದ್ದೆವೆ.
ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳು ಈಡೇರಿಕೆ ಬಗ್ಗೆ ಸದನದಲ್ಲಿ ಸಚಿವರು ಭರವಸೆ ನೀಡಿದಂತೆ ಕೂಡಲೇ ನೌಕರರ ಸೇವಾ ಭದ್ರತೆ ಹಾಗೂ ವೇತನ ಪರಿಷ್ಕರಣೆ ಕುರಿತ ಶ್ರೀನಿವಾಸಚಾರಿ ವರದಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಿ ಆದೇಶಗಳನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ವರ್ಷ ಈ ಗುತ್ತಿಗೆ ನೌಕರರಿಗೆ ಏಪ್ರಿಲ್ ಒಂದರಂದು ಒಂದು ದಿನ ವಿರಾಮ ನೀಡುವ *ಅನಿಷ್ಟ ಪದ್ಧತಿ* ಜಾರಿಯಲ್ಲಿದ್ದು ಇದನ್ನು ರದ್ದು ಪಡಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿಯವರೂ ಆಗ್ರಹಿಸಿದ್ದಾರೆ.