ಆದ್ಯೋತ್ ಸುದ್ದಿನಿಧಿ:
ಕೇಂದ್ರಸಾಹಿತ್ಯ ಅಕಾಡೆಮಿಯ ೨೦೨೨ರ ಸಾಲಿನ ಬಾಲಸಾಹಿತ್ಯ ಪ್ರಶಸ್ತಿಗೆ ಉತ್ತರಕನ್ನಡಜಿಲ್ಲೆಯ ಸಿದ್ದಾಪುರದ ನಿವೃತ್ತ ಶಿಕ್ಷಕ ತಮ್ಮಣ್ಣ ಬೀಗಾರರ ಬಾವಲಿ ಗುಹೆ ಪುಸ್ತಕಕ್ಕೆ ಲಭಿಸಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೨ ರ ಯುವ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡಿಸಂಬರ್ ತಿಂಗಳಲ್ಲಿ ದೇಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು
ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಈ ಪ್ರಶಸ್ತಿಯು ಐವತ್ತು ಸಾವಿರ ರುಪಾಯಿ ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ.
ದಾದಾಪೀರ್ ಅವರ ‘ನೀಲಕುರಿಂಜಿ ‘ ಕಥಾ ಸಂಕಲನಕ್ಕೆ ಯುವ ಸಾಹಿತ್ಯ ಪ್ರಶಸ್ತಿ ಬಂದಿದ್ದರೆ ತಮ್ಮಣ್ಣ ಬೀಗಾರ ಅವರ ‘ ಬಾವಲಿಗುಹೆ’ ಕಾದಂಬರಿಗೆ ಬಾಲಸಾಹಿತ್ಯ ಪ್ರಶಸ್ತಿ ಸಿಕ್ಕಿದೆ.
ಯುವ ಸಾಹಿತ್ಯ ಪ್ರಶಸ್ತಿಯ ಜ್ಯೂರಿಗಳಾಗಿ ಸ ಉಷಾ, ನಗರಗೆರೆ ರಮೇಶ್ ಹಾಗೂ ಎನ್ ಎಸ್ ಗುಂಡೂರ ಕೆಲಸ ನಿರ್ವಹಿಸಿದ್ದರೆ ಬಾಲ ಸಾಹಿತ್ಯ ಪ್ರಶಸ್ತಿಗೆ ಶಿವಲಿಂಗಪ್ಪ ಹಂದಿಹಾಳು , ಲೋಹಿತ್ ನಾಯ್ಕರ್ ಹಾಗೂ ಎಂ ಎಚ್ ನಾಗರಾಜ್ ಅವರು ಜ್ಯೂರಿಗಳಾಗಿದ್ದರು.ಪುಸ್ತಕ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕರಾದ ಡಾ ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆಯಿತು.
ಮಕ್ಕಳಸಾಹಿತಿ ತಮ್ಮಣ್ಣ ಬೀಗಾರ
‘ತಮ್ಮಣ್ಣ ಬೀಗಾರ’ ಎಂಬ ಕಾವ್ಯ ನಾಮದಿಂದ ಮೂರು ದಶಕಗಳಿಂದ ಬರೆಯತ್ತಿರುವ ತಮ್ಮಣ್ಣ ಕೋಮಾರ ಅವರು ನವೆಂಬರ ೨೨, ೧೯೫೯ ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದವರು. ಇವರು ಸ್ನಾತಕೋತ್ತರ ಪದವೀಧರರಾಗಿದ್ದು ಶಿಕ್ಷಕರಾಗಿ ಮೂವತ್ತೇಳು ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುತ್ತಾರೆ. ಸಿದ್ದಾಪುರದಲ್ಲಿ ವಾಸಿಸಿರುವ ಇವರು ಸಾಹಿತ್ಯ ರಚನೆ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆ ಮುಂತಾದವುಗಳಲ್ಲಿ ನಿರತರು.
ಮಕ್ಕಳ ಸಾಹಿತ್ಯಕ್ಕೆ ಮಲೆನಾಡಿನ ಸೊಗಸನ್ನು ಅದರ ಹಚ್ಚಹಸಿರಿನ ಹೊದಿಕೆಯನ್ನು ಯಾವುದೇ ಸಾಂಪ್ರದಾಯಿಕ-ನೀತಿಗಳ ಹಂಗಿಲ್ಲದೆ ಕಟ್ಟಿಕೊಟ್ಟವರು ತಮ್ಮಣ್ಣ ಬೀಗಾರ ಅವರು. ಪ್ರಕೃತಿಯ ಪ್ರಶಾಂತ ಪಾಠಗಳು ತುಂಬಾ ಕುತೂಹಲಕರವಾಗಿ ಅವರ ಗದ್ಯ ಹಾಗೂ ಕವಿತೆಗಳಲ್ಲಿ ಅಡಕವಾಗಿವೆ.
ಮಲೆನಾಡಿನ ಮಕ್ಕಳ ಬದುಕುವತ್ತು ಅವರ ಬದುಕಿನ ಸಂಗತಿಗಳು ತುಂಬಾ ವೈವಿಧ್ಯಮಯವಾಗಿ ಅರಳಿಕೊಳ್ಳುವುದನ್ನು ಕಾಣಬಹುದು. ಬೆಟ್ಟ-ಕಣಿವೆಗಳನ್ನು ಏರಿ ಇಳಿದ ಮಕ್ಕಳ ಖುಷಿ, ವಿನೋದ, ಹುಡುಗಾಟಿಕೆ ಮುದ ನೀಡುತ್ತವೆ. ಅದೇರೀತಿ ಅಲ್ಲಿಯ ವೈರುಧ್ಯಗಳನ್ನು ಕೂಡಾ ಹೇಳಲು ತಮ್ಮಣ್ಣ ಅವರು ಹಿಂಜರಿಯಲಾರರು. ಮೊದಲಿನಿಂದಲೂ ಇವರದು ತುಂಬಾ ಸಮಾಧಾನ ಚಿತ್ತದ ಬರವಣಿಗೆ. ಒಂದು ರೀತಿಯಲ್ಲಿ ಅದು ಯಾವುದೇ ನಿಡುಸುಯ್ಯುವಿಕೆ ಇಲ್ಲದ ನಿಸರ್ಗದ ನಿತ್ಯೋತ್ಸವ.
‘ಗುಬ್ಬಚ್ಚಿ ಗೂಡು’ ‘ಚಿಂವ್ ಚಿಂವ್’ ‘ಜೀಕ್ ಜೀಕ್’ ‘ಪುಟಾಣಿ ಪುಡಿಕೆ’ ‘ಸೊನ್ನೆ ರಾಶಿ ಸೊನ್ನೆ’ ‘ತೆರೆಯಿರಿ ಕಣ್ಣು’ ‘ಖುಷಿಯ ಬೀಜ’ ‘ಹಾಡಿನ ಹಕ್ಕಿ’ ಮುಂತಾದ ಮಕ್ಕಳ ಕವನಸಂಕಲನಗಳು, ‘ಕಪ್ಪೆಯ ಪಯಣ’ ‘ಜಿಂಕೆ ಮರಿ’ ‘ಹಸಿರೂರಿನ ಹುಡುಗ,’ ‘ಮಲ್ನಾಡೆ ಮಾತಾಡು’, ‘ಅಮ್ಮನ ಚಿತ್ರ,’ ‘ಪುಟ್ಟನ ಕೋಳಿ’, ‘ಉಲ್ಟಾ ಅಂಗಿ’ ‘ಗಿರಗಿಟ್ಟಿ’ ‘ನಕ್ಷತ್ರ ನೋಡುತ್ತ’ ‘ಪುಟ್ಟಿಯೂ ಹಾರುತ್ತಿದ್ದಳು’ ಮುಂತಾದ ಮಕ್ಕಳ ಕಥಾಸಂಕಲನಗಳು ‘ಮಾತಾಟ ಮಾತೂಟ’, ‘ಮರಬಿದ್ದಾಗ’, ಎನ್ನುವ ಮಕ್ಕಳಿಗಾಗಿ ಲಲಿತ ಬರಹಗಳು, ‘ಬಾವಲಿ ಗುಹೆ’ ‘ಫ್ರಾಗಿ ಮತ್ತು ಗೆಳೆಯರು’ ಎಂಬ ಮಕ್ಕಳ ಕಾದಂಬರಿಗಳೂ ಸೇರಿ ಇಪ್ಪತ್ತೇಳು ಕೃತಿಗಳನ್ನು ರಚಿಸಿದ್ದಾರೆ. ಆಕಾಶವಾಣಿಯಲ್ಲಿ ಇವರ ಕವಿತಗಳು, ದೂರದರ್ಶನದಲ್ಲಿ ಕಲಾಕೃತಿ ಹಾಗೂ ಸಂದರ್ಶನ ಪ್ರಸಾರ ಆಗಿವೆ. ಇವರ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ ಚಂದ್ರ ಪ್ರಶಸ್ತಿ, ಫ್ರಾಗಿ ಮತ್ತು ಗೆಳೆಯರು ಕೃತಿಗೆ ಪುಸ್ತಕ ಸೊಗಸು ಬಹುಮಾನ ಬಂದಿವೆ. ಇದಲ್ಲದೇ ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮುಂತಾದವು ದೊರೆತಿವೆ.
——–
ಉತ್ತರ ಕನ್ನಡದ ದಟ್ಟ ಹಸಿರಿನ ಕಾಡು ಪ್ರದೇಶದ ಹಳ್ಳಿಯಿಂದ ಬಂದವನು ನಾನು. ಇಲ್ಲಿನ ಪರಿಸರ ಮತ್ತು ಮಕ್ಕಳ ಪ್ರೀತಿ ನನ್ನ ಮೇಲೆ ಆಳವಾದ ಪ್ರಭಾವ ಬೀರಿವೆ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಹಳ್ಳಿಯಲ್ಲಿ ಕೆಲಸಮಾಡುತ್ತ ನಾನು ಮಕ್ಕಳಿಗಾಗಿ ಬರೆಯುತ್ತ ಬಂದಿದ್ದೇನೆ. ಇದನ್ನು ಗುರುತಿಸಿ ನನಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಬಂದಿರುವುದು ಅತ್ಯಂತ ಖುಷಿ ಆಗುತ್ತದೆ. ಮಕ್ಕಳಿಗೆ ಅವರ ಖುಷಿ ಹೆಚ್ಚಿಸುವ ತನ್ಮೂಲಕ ಅವರ ಮನಸ್ಸು ಹಾಗೂ ಹೃದಯ ಅರಳುವ ಸಾಹಿತ್ಯ ಹೆಚ್ಚು ಹೆಚ್ಚು ರೂಪುಗೊಂಡು ಅವರಿಗೆ ಸಿಗುವಂತಾಗಬೇಕು ಎನ್ನುವುದು ನನ್ನ ಆಸೆ. ಬಾವಲಿ ಗುಹೆ ಕಾದಂಬರಿಯಲ್ಲಿ ಮಕ್ಕಳ ಕಣ್ಣಿಂದ ಪರಿಸರ ನೋಡುತ್ತ ಅಲ್ಲಿ ಆಗುವ ತೊಂದರೆಗಳಿಗೆಲ್ಲ ಮಕ್ಕಳು ಹೇಗೆಲ್ಲ ಸ್ಪಂದಿಸುತ್ತಾರೆ ಎನ್ನುವ ನೋಟ ಇದೆ. ಇಲ್ಲಿ ಮಕ್ಕಳು ಪರಿಸರ ಹಾನಿಯಿಂದಾಗುವ ನೋವನ್ನು ಗಮನಿಸುತ್ತಾರೆ. ದೊಡ್ಡವರೊಂದಿಗೆ ಕೈ ಜೋಡಿಸುತ್ತಾರೆ. ಹೋರಾಟಕ್ಕೆ ಇಳಿಯುತ್ತಾರೆ. ತಾವೇ ಯಾವುದೋ ಹೊಳಹುಗಳನ್ನು ಕಂಡುಕೊಂಡು ಪತ್ತೇದಾರರಾಗುತ್ತಾರೆ… ಗಣಿಗಾರಿಕೆಯ ಸುತ್ತ ಹೆಣೆದಿರುವ ಮಕ್ಕಳ ಕಾದಂಬರಿ ಇದು. ಈ ಖುಷಿಯ ಸಂದರ್ಭದಲ್ಲಿ ನನಗೆ ಮಾರ್ಗ ದರ್ಶನ ನೀಡಿದ ಹಿರಿಯರನ್ನು, ತೀರ್ಪುಗಾರರನ್ನು, ಸ್ನೇಹಿತರನ್ನು, ಪ್ರಕಾಶಕರನ್ನು ಹಾಗೂ ಪ್ರೀತಿಯ ಓದುಗ ಮಕ್ಕಳನ್ನು ಮತ್ತೂ ಹಿರಿಯರನ್ನು ನಾನು ಸ್ಮರಿಸುತ್ತೇನೆ.
–ತಮ್ಮಣ್ಣ ಬೀಗಾರ.