ಪ್ರಚಂಡ ಪುಟಾಣಿಗಳು ಚಲನಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಆರಂಭ

ಆದ್ಯೋತ್ ಸುದ್ದಿನಿಧಿ:
ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪದ್ಮಾವತಿಯವರು ನಿರ್ಮಿಸುತ್ತಿರುವ ಪ್ರಚಂಡ ಪುಟಾಣಿಗಳು ಮಕ್ಕಳ ಚಲನಚಿತ್ರದ ಚಿತ್ರೀಕರಣ ಮುಕ್ತಾಯಗೊಂಡು ಡಬ್ಬಿಂಗ್ ಕಾರ್ಯ ಆರಂಭಗೊಂಡಿದೆ.

ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಗಾಗಿ ಬಲಿಕೊಡುವಾಗ ಅಲ್ಲಿಗೆ ಬರುವ ಹಿರಿಯ ನಟ ಶಶಿಕುಮಾರ ಅವರು ಅಮಾಯಕರನ್ನು ಕಾಪಾಡಲು “ಯುಗಯುಗದಲ್ಲೂ ನಾನು ಅವತಾರವೆತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ ಸಂಹಾರವೇ”ಎನ್ನುತ್ತ ಖಳನಟರಾದ ಬಲರಾಮ್ ಪಂಚಾಲ್, ಕೋಲಾರಬಾಲು, ನಿಡವಳ್ಳಿ ರೇವಣ್ಣ, ಗುರು ಪ್ರಸನ್ನ ಮೊದಲಾದವರನ್ನು ಸದೆಬಡಿಯುವ ಸಾಹಸ ದೃಶ್ಯಗಳೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯಗೊಳಿಸಲಾಯಿತು.
ಕೋಲಾರ, ಚಿಂತಾಮಣಿ ಅಂತರಗಂಗೆ, ಕೈಲಾಸಗಿರಿ ಮೊದಲಾದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ಪ್ರಚಂಡ ಪುಟಾಣಿಗಳು ಚಿತ್ರದಲ್ಲಿ ಹಿರಿಯ ಕಲಾವಿದರಾದ ಅವಿನಾಶ್, ಶೋಭರಾಜ್, ಶಶಿಕುಮಾರ್,ಬಲರಾಮ್ ಪಂಚಾಲರೊಂದಿಗೆ ನರಸಾಪುರ ನಾಗರಾಜ, ಅಶ್ವತ್ ರೆಡ್ಡಿ ,ಕೋಲಾರ ಮಂಜುಳ, ಸುಗುಣ, ಶ್ರೀಕಾಂತ್, ಸಂದೀಪ್ , ಹನುಮಂತಪ್ಪ, ಬುಲೆಟ್ ರಘು,ರೆಹಮಾನ್, ಜಯಕರ್ನಾಟಕ ತ್ಯಾಗರಾಜ್, ಬೇಬಿ ಅಂಕಿತ್, ಮಾಸ್ಟರ್ ದೃವ, ಮಾಸ್ಟರ್ ಕ್ರಿಶನ್, ಮಾಸ್ಟರ್ ಹರ್ಷ ಹಾಗೂ 50 ಮಂದಿ ಶಾಲಾ ಮಕ್ಕಳು ಪಾಲ್ಗೊಂಡಿದ್ದಾರೆ.

ಕಥಾ ಸಾರಾಂಶ:
ಬನಹಳ್ಳಿಯ ಸರಕಾರಿ ಶಾಲೆಯಿಂದ ಐವತ್ತು ಮಕ್ಕಳನ್ನು ಕರೆದುಕೊಂಡು ಪ್ರವಾಸಕ್ಕೆ ತೆರಳುವ ಶಾಲಾ ಸಿಬ್ಬಂದಿ ಮಾರ್ಗ ಮದ್ಯದಲ್ಲಿ ಬಸ್ಸು ಕೆಟ್ಟು ನಿಲ್ಲುತ್ತದೆ. ಎಷ್ಟೇ ಪ್ರಯತ್ನಿಸಿದರೂ ಬಸ್ಸು ರಿಪೇರಿಯಾಗದೆ ಕಂಗಾಲಾಗುತ್ತಾರೆ. ಹಸಿವಿನಿಂದ ಬಳಲಿದ ಮಕ್ಕಳನ್ನು ಹತ್ತಿರದಲ್ಲೇ ಇರುವ ಆಶ್ರಮವೊಂದಕ್ಕೆ ಕರೆದೊಯ್ಯುತ್ತಾರೆ. ಆದರೆ ಅಲ್ಲಿ ಆಶ್ರಮದಲ್ಲಿ ಐದು ಮಕ್ಕಳು ಆಕಸ್ಮಿಕವಾಗಿ ಕಾಣೆಯಾಗುತ್ತಾರೆ.
ಮಕ್ಕಳು ಎಲ್ಲಿ ಹೋದರು ಎಂದು ಹುಡುಕುತ್ತ ಹೊರಟ ಶಿಕ್ಷಕರು ಪಡುವ ಕಷ್ಟ,ನಿಧಿಗಳ್ಳರ ಕೈಗೆ ಸಿಕ್ಕ ಮಕ್ಕಳು ಹೇಗೆ ಪಾರಾಗುತ್ತಾರೆಂಬ ಕಥಾಹಂದರವು ಚಿತ್ರದಲ್ಲಿದೆ.
ಕ್ಷಣ ಕ್ಷಣಕ್ಕೂ ಕುತೂಹಲ ಜೊತೆಗೆ ಮಕ್ಕಳ ಸಾಹಸ ಚಿತ್ರದಲ್ಲಿದೆ , ಚಿತ್ರೀಕರಣ ವೇಳೆ ಎಲ್ಲ ಕಲಾವಿದರೂ ಬಹಳಷ್ಟು ಸಹಕಾರ ನೀಡಿದ್ದು ಉತ್ತಮವಾಗಿ ಅಭಿನಯಿಸಿದ್ದಾರೆ. ಇದೀಗ ಡಬ್ಬಿಂಗ್ ಕಾರ್ಯ ಆರಂಭಗೊಂಡಿದ್ದು ಥಿಯೇಟರ್‍ಗಳು ತೆರೆದ ತಕ್ಷಣ ರಾಜ್ಯಾದ್ಯಂತ ಬಿಡುಗಡೆ ಮಾಡುವದಾಗಿ ನಿರ್ದೇಶಕ ರಾಜೀವ ಕೃಷ್ಣ ಹೇಳಿದ್ದಾರೆ.
ತಾಂತ್ರಿಕವರ್ಗದಲ್ಲಿ ವಿನು ಮನಸು-ಸಂಗೀತ, ಸುರೇಶ ಕಂಬಳಿ-ಸಾಹಿತ್ಯ, ಪ್ರಮೋದ ಭಾರತೀಯ- ಛಾಯಾಗ್ರಹಣ, ಸತೀಶ ಚಂದ್ರಯ್ಯ-ಸಂಕಲನ, ಸುನೀಲಕುಮಾರ-ನಿರ್ಮಾಣ ನಿರ್ವಹಣೆ ಪ್ರಚಾರಕಲೆ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಕಥೆ-ಚಿತ್ರಕಥೆ-ಸಂಭಾಷಣೆ-ನೃತ್ಯ-ಸಾಹಸ-ಹಾಗೂ ನಿರ್ದೇಶನ ರಾಜೀವಕೃಷ್ಣ ಅವರದ್ದಾಗಿದೆ.

About the author

Adyot

Leave a Comment