ಆದ್ಯೋತ್ ಸುದ್ದಿನಿಧಿ:
ಟೆನ್ ಟ್ರೀಸ್ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ರೂಪವಿಶ್ವನಾಥ ನಿರ್ಮಿಸುತ್ತಿರುವ ರಸಗುಲ್ಲ ಚಲನಚಿತ್ರದ ಮುಹೂರ್ತ ಸಮಾರಂಭ ಚಿಕ್ಕಬಳ್ಳಾಪುರ ನಗರದ ಶ್ರೀಸಾಯಿಬಾಬಾ ಮಂದಿರದಲ್ಲಿ ಇತ್ತೀಚೆಗೆ ನೆರವೇರಿತು.
ಸಮಾಜ ಸೇವಕರು ಸಾಹಿತಿ ಶ್ರೀನಿವಾಸ್, ಪ್ರಾಂಶುಪಾಲ ಮಂಜುನಾಥರಾವ್, ರಂಗಭೂಮಿ ನಿರ್ದೇಶಕ ರಾಜರಂಗಯ್ಯ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು. ಚಲನಚಿತ್ರವೊಂದರ ಆಡಿಷನ್ ಗಾಗಿ ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುವ ಮೂರು ಜನ ಹುಡುಗಿಯರು ಹಾಗೂ ಮೂರು ಜನ ಹುಡುಗರಿಗೆ ಮಾರ್ಗಮಧ್ಯದಲ್ಲಿ ಎದುರಾಗುವ ಸಮಸ್ಯೆಗಳು ಏನು ಹಾಗೂ ಆ ಸಮಸ್ಯೆಗಳಿಂದ ಆರು ಜನರೂ ಹೇಗೆ ಪಾರಾಗುತ್ತಾರೆ ಎಂಬ ಕುತೂಹಲ ಭರಿತ ಕಥಾ ಹಂದರ ಚಿತ್ರದಲ್ಲಿದೆ.
ತಾರಾಗಣದಲ್ಲಿ ಶ್ರೀಕಾಂತ್, ಐಶ್ವರ್ಯ ಅಂಚಿಮಠ, ಸುಪ್ರಿತಾರಾಜ್, ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾರ್ಧನ್ ಮೊದಲಾದವರು ನಟಿಸುತ್ತಿದ್ದಾರೆ. ಇನ್ನುಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ.
ಒಟ್ಟು ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದ್ದು ಚಿಕ್ಕಬಳ್ಳಾಪೂರ, ಮಿಣಕನಗುರ್ಕಿ ವಿದುರಾಶ್ವತ್ಥ ಚಿತ್ರಾವತಿ, ದೇವನಹಳ್ಳಿ ಹಾಗೂ ಬೆಂಗಳೂರಿನಿಂದ ಹೈದರಾಬಾಧ್ ಗೆ ಹೊರಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿತೀಕರಣ ನಡೆಯಲಿದೆ ಎಂದು ನಿರ್ದೇಶಕ ರಾಜೀವಕೃಷ್ಣ ಮತ್ತು ನಿರ್ಮಾಪಕಿ ರೂಪಾವಿಶ್ವನಾಥ ತಿಳಿಸಿದ್ದಾರೆ.
ಸುರೇಶ ಕಂಬಳಿ ಸಾಹಿತ್ಯ, ವಿನುಮನಸು ಸಂಗೀತ, ರಮೇಶ್ ಕೊಯಿರಾ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಡಾ.ಪ್ರಭು ಗಂಜಿಹಾಳ ಮತ್ತು ಡಾ.ವೀರೇಶ್ ಹಂಡಗಿ ಪ್ರಚಾರಕಲೆ ಈ ಚಿತ್ರಕ್ಕಿದ್ದು, ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.