ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಶುಕ್ರವಾರ ರಾಜ್ಯಸರಕಾರಿ ನೌಕರರ ಸಂಘದ ಸ್ಥಳೀಯ ಶಾಖೆಯವತಿಯಿಂದ
ನಿವೃತ್ತ ನೌಕರರಿಗೆ ಗೌರವ ಸಮರ್ಪಣೆ,ಪ್ರತಿಭಾ ಪುರಸ್ಕಾರ
ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ,ರಾಜ್ಯಸರಕಾರಿ ನೌಕರರ ಸಂಘ ನೌಕರರ ಸಮಸ್ಯೆ ಬಗೆಹರಿಸುವಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದು ವೇತನ ತಾರತಮ್ಯ ನಿವಾರಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಿದೆ,ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ನೌಕರರ ವೇತನದಲ್ಲಿ ಬಹಳಷ್ಟು ಅಂತರದ ತಾರತಮ್ಯವಿದ್ದು ಹಲವು ರಾಜ್ಯಗಳು ಈ ತಾರತಮ್ಯವನ್ನು ನಿವಾರಿಸಿದ್ದಾರೆ ಆದರೆ ರಾಜ್ಯಸರಕಾರ ಈ ದಿಸೆಯಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗಲಿದೆ ಅಲ್ಲದೆ ನೂತನ ಪಿಂಚಣಿ ಯೋಜನೆಯಿಂದ 2.5ಲಕ್ಷ ನೌಕರರಿಗೆ ಅನ್ಯಾಯವಾಗುತ್ತಿದ್ದು ಸರಕಾರ ಈ ಪಿಂಚಣಿ ಯೋಜನೆಯನ್ನು ಹಿಂದಕ್ಕೆ ಪಡೆದು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.
ಸರಕಾರಿ ನೌಕರರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಚುನಾಯಿತ ಪ್ರತಿನಿಧಿಗಳು ಅವರ ಸಂಬಂಧಿಗಳಾಗಿರಬಾರದು ಹೀಗೆ ಹತ್ತು ಹಲವು ಷರತ್ತುಗಳುಳ್ಳ ಮಿಲ್ಟ್ರಿ ಕಾನೂನು ಜಾರಿಮಾಡಲು ಸರಕಾರ ಹೊರಟಿತ್ತು ಆದರೆ ನಮ್ಮ ಸಂಘ ಇದನ್ನು ತೀವ್ರವಾಗಿ ವಿರೋಧಿಸಿ ಹಿಂಪಡೆಯುವಂತೆ ಮಾಡಿದೆ ಅಲ್ಲದೆ ಬರುವ ಏಪ್ರೀಲ್ ನಿಂದ ನೌಕರರ ಮತ್ತು ಅವರ ಕುಟುಂಬದವರ ಆರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಯಾವುದೇ ಖಾಸಗಿ ಆಸ್ಪತ್ರೆಗೂ ನಿಶುಲ್ಕವಾಗಿ ಹೋಗಿ ಚಿಕಿತ್ಸೆ ಪಡೆಯುವ ಯೋಜನೆಯನ್ನು ಮಾಡಲಾಗುತ್ತಿದೆ ಹೀಗೆ ನೌಕರರ ಹಿತಕಾಪಾಡಲು ಸಂಘ ಹಲವು ಯೋಜನೆ ಮಾಡುವುದರ ಜೊತೆಗೆ ಸರಕಾರದ ಜೊತೆಗೆ ಯಾವುದೇ ಸಂಘರ್ಷಕ್ಕೂ ಸಿದ್ದವಾಗಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ ಮಾತನಾಡಿ,ನಮ್ಮ ಸಂಘಟನೆಯೊಳಗಿರುವ ಶಿಕ್ಷಕರು ಪ್ರತ್ಯೇಕವಾಗಿ ಹಲವು ಸಂಘಗಳನ್ನು ಮಾಡಿಕೊಂಡಿದ್ದು ಒಡೆದ ಮನೆಯಂತಾಗಿದೆ ಒಡಕು ಹೆಚ್ಚಾದಂತೆ ಸಮಸ್ಯೆ ಹೆಚ್ಚಾಗುತ್ತದೆ ಇದನ್ನರಿತುಕೊಂಡು ಶಿಕ್ಷಕರು ಮುಂಬರುವ ಶಿಕ್ಷಕರ ಚುನಾವಣೆಯಲ್ಲಿ ಅರ್ಹ ವ್ಯಕ್ತಿಯನ್ನು ಚುನಾಯಿಸಬೇಕು ಇಂತಹ ಚುನಾಯಿತನಾದವನು ನಿಮ್ಮ ಸಮಸ್ಯೆ ಪರಿಹರಿಸಲು ಇರುವಂತಹವನಾಗಬೇಕು ಮತ್ತು ಸರಕಾರಿ ನೌಕರರ ಸಂಘಕ್ಕೆಪೂರಕನಾಗಿರುವಂತಹವನಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದ ಸ್ಥಳೀಯ ಶಾಖೆಯ ಅಧ್ಯಕ್ಷ ರಾಜೇಶ ನಾಯ್ಕ,ನಮ್ಮ ಸಂಘಟನೆಯು ಸದೃಢವಾಗಿದ್ದು ನೌಕರರ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗಿದೆ ವೇತನ ತಾರತಮ್ಯ ನಿವಾರಣೆಯಾಗಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು ಉತ್ಸಾಹಿ,ಯುವ ರಾಜ್ಯಾಧ್ಯಕ್ಷರು ನಮಗೆ ದೊರೆತಿದ್ದು ಮುಂದಿನ ಕೆಲವೇ ದಿನಗಳಲ್ಲಿ ಈ ಬೇಡಿಕೆಯೂ ಈಡೇರಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ನೌಕರರ ಸಂಘದ ಗೌರವಾಧ್ಯಕ್ಷ ವಿ.ವಿ.ಶಿವರುದ್ರಯ್ಯ,ಉಪಾಧ್ಯಕ್ಷ ಆರ್.ಮೋಹನಕುಮಾರ,ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ನಾಯ್ಕ ಮುಂತಾಧವರು ಉಪಸ್ಥಿತರಿದ್ದರು.