ಸಿದ್ದಾಪುರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಏನೂ ಗೊತ್ತಿಲ್ಲದವರು ಅದರ ಬಗ್ಗೆ ಮಾತನಾಡುತ್ತಾರೆ. ಅದರ ಒಳ ಹೊಕ್ಕು ನೋಡದೆ ಅದರ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಸಂಘದ ಎಲ್ಲಾ ಚಟುವಟಿಕೆಗಳು ಮುಕ್ತವಾಗಿರುತ್ತದೆಂದು ಹಿಂದು ಜಾಗರಣ ವೇದಿಕೆಯ ಸಂಘಟನಾ ಚಾಲಕ ಜಗದೀಶ ಕಾರಂತ ಹೇಳಿದರು.
ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆದ ಬೃಹತ್ ಹಿಂದು ಚೈತನ್ಯ ಸಮಾವೇಶದಲ್ಲಿ ಅವರು ಮಾತನಾಡಿ, ಕೇವಲ ಹತ್ತು ಜನರಿಂದ ಪ್ರಾರಂಭವಾದ ಆರ್.ಎಸ್.ಎಸ್. ಇಂದು ಹಿಂದುಸ್ಥಾನ ಮಾತ್ರವಲ್ಲ ಜಗತ್ತಿನ ಬೇರೆ ಬೇರೆ ದೇಶದಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಹಿಂದುಗಳನ್ನು ಜಾಗೃತಗೊಳಿಸುವುದಕ್ಕೆ ಸೀಮಿತಗೊಳ್ಳದೆ ವಿವಿಧ ಸೇವೆಗಳಿಗೆ ತನ್ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿಕೊಂಡಿದೆ ಎಂದು ಹೇಳಿದರು.
ಸೆಕ್ಯೂಲರ್ ಎಂದು ಹೇಳಿಕೊಳ್ಳುವವರು ಸ್ವಾತಂತ್ರ್ಯ ಬಂದ ಪ್ರಾರಂಭದಲ್ಲಿ ಆಡಳಿತ ನಡೆಸಿ ನಮ್ಮ ದೇಶವನ್ನು ಧರ್ಮ ಛತ್ರವನ್ನಾಗಿಸಿದೆ. ಭಾರತವನ್ನು ಇಸ್ಲಾಮೀಕರಣಗೊಳಿಸುವ ದುರುದ್ದೇಶದಿಂದ ಭಾರತದೊಳಗೆ ನುಸುಳಿ ಬಂದವರಿಗೆ ರೇಷನ್ ಕಾಡ್೯, ಓಟಿಂಗ್ ಕಾಡ್೯ ನೀಡುವ ಮೂಲಕ ಅಧಿಕಾರದ ಆಸೆಯನ್ನು ತೋರಿಸಿಕೊಂಡಿದ್ದಾರೆ. ನಮ್ಮ ದೇಶದ ಪ್ರಜೆಗಳು ಇವರು ಎಂದು ಗುರುತಿಸುವ ಕೆಲಸವಾಗಿಲ್ಲ, ನಮ್ಮ ದೇಶಕ್ಕೆ ಬೇಲಿ ನಿರ್ಮಿಸಿಲ್ಲ. ಆದರೆ ಕಳೆದ ಐದು ವರ್ಷದಿಂದ ಈ ಕೆಲಸಗಳು ನಡೆಯುತ್ತಿವೆ. ನಮ್ಮ ಪ್ರಜೆಗಳಲ್ಲದವರನ್ನು ಹೊರ ಕಳುಹಿಸುವುದಕ್ಕೆ ಈ ಸೆಕ್ಯುಲರ್ ಎನಿಸಿಕೊಂಡವರು ವಿರೋಧಿಸುತ್ತಿರುವುದು ದೇಶದ್ರೋಹವಾಗಿರುತ್ತದೆ ಎಂದು ಕಿಡಿಕಾರಿದರು.
ವಿಜಯ ಹೆಗಡೆ ದೊಡ್ಮನೆ ಮಾತನಾಡಿ,ಹಿಂದು ಧರ್ಮ ಎನ್ನುವುದು ಒಂದು ಭಾಷೆಯಲ್ಲ,ಒಂದು ಗ್ರಂಥವಲ್ಲ ಹಲವು ವಿಭಿನ್ನತೆಗಳು ಸೇರಿ ಒಂದಾಗಿದೆ. ಭಿನ್ನತೆಯಲ್ಲಿ ಏಕತೆಯನ್ನು ಸಾರುವ ಧರ್ಮ ಹಿಂದು ಧರ್ಮವಾಗಿದೆ ಎಂದರು.