ಆದ್ಯೋತ್ ಸುದ್ದಿನಿಧಿ:
ಪ್ರತಿ ಒಬ್ಬ ಮನುಷ್ಯನೂ ತಮ್ಮೊಳಗಿನ ಅಹಂಭಾವ ಹಾಗೂ ಹೊರಗಿನ ಆಡಂಬರ ಕಳೆದುಕೊಳ್ಳಬೇಕು. ಇದರಿಂದ ಸದಾ ನೆಮ್ಮದಿ ಕಂಡುಕೊಳ್ಳಬಹುದು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಹೇಳಿದರು.
ಅವರು ನಗರದ ಹೊರವಲಯದ ವೇದ ಆರೋಗ್ಯ ಕೇಂದ್ರದ ನಿಸರ್ಗಮನೆಯಲ್ಲಿ ಪ್ರಸಿದ್ಧ ವೈದ್ಯ, ಅಂಕಣಕಾರ ಡಾ. ವೆಂಕಟರಮಣ ಹೆಗಡೆ ದಂಪತಿಗಳನ್ನು ಸಮ್ಮಾನಿಸಿ ಮಾತನಾಡಿದರು.
ಪ್ರಕೃತಿಯ ನಡುವೆ ಇದ್ದರೆ ಎಲ್ಲವೂ ಕಳೆದು ಹೋಗುತ್ತದೆ. ಒಳಗಿನ ಹಾಗೂ ಹೊರಗಿನ ಒತ್ತಡ ಕಳೆಯುವ ಕೆಲಸ ನಿಸರ್ಗ ಮನೆಯಲ್ಲಿ ಆಗುತ್ತಿದೆ. ಡಾ.ವೆಂಕಟರಮಣ ಹೆಗಡೆ ಅವರು ಸಮಾಜಕ್ಕೆ ನೀಡುತ್ತಿರುವ ಜನರ ಆರೋಗ್ಯ ವರ್ಧನಾ ಸೇವೆ ದೊಡ್ಡದು ಕಲೆ ಸಾಹಿತ್ಯ ಸಂಸ್ಕೃತಿಗಳ ಉಳಿವು ಆಗಬೇಕು. ಅಂಥ ಉಳಿಸುವ ಕೆಲಸ, ಉತ್ತೇಜಿಸುವ ಕೆಲಸ ಆರೋಗ್ಯ ಜಾಗೃತಿಯ ಜೊತೆ ಇಲ್ಲಿ ನಡೆದಿದೆ, ಕನ್ನಡದ ನೆಲದಲ್ಲಿ ಕನ್ನಡ ಉಳಿಸಿ ಬೆಳಸುವ ಕಾರ್ಯ ಆಗಬೇಕು ಎಂದರು.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,ಒಂದಿಂಚು ಉದ್ದದ ನಾಲಗೆಯ ರುಚಿಗೆ ಇಡೀ ದೇಹದ ಆರೋಗ್ಯವನ್ನು ನಾವು ಕೆಡಸಿಕೊಳ್ಳುತ್ತಿದ್ದೇವೆ. ಯುವ ಜನತೆ, ಮಕ್ಕಳಲ್ಲಿ ಕೂಡ ಆರೋಗ್ಯ ಜಾಗೃತಿ ಹೆಚ್ಚಬೇಕು ಮಲೆನಾಡಿನ ಮಡಿಲಲ್ಲಿ ಇಂಥದ್ದೊಂದು ನಿಸರ್ಗ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದ ಡಾ. ವೆಂಕಟರಮಣ ಹೆಗಡೆ ಅವರ ಹಾಗೂ ಅವರ ಬಳಗದ ಶ್ರಮ ದೊಡ್ಡದು. ಆರೋಗ್ಯ ಇನ್ನಷ್ಟು ಸಂಪಾದಿಸಲು ಇದು ಬಹಳ ಅನುಕೂಲ ಎಂದೂ ಹೇಳಿದರು.
ಈ ವೇಳೆ ಸಂಗೀತಾ ವಿ.ಹೆಗಡೆ ಇದ್ದರು. ಇದಕ್ಕೂ ಮುನ್ನ ತುಳಸಿ ಹೆಗಡೆ ಅವಳಿಂದ ವಿಶ್ವಶಾಂತಿ ಸರಣಿಯ ಗಂಗಾವತರಣ ಯಕ್ಷನೃತ್ಯ ರೂಪಕ ಪ್ರದರ್ಶನ ಕಂಡಿತು. ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ ಪ್ರಸಾದನ ನಡೆಸಿಕೊಟ್ಟರು.