“ನುಡಿಮುತ್ತು” ಚಲನಚಿತ್ರದ ಪೋಸ್ಟರ್ ಬಿಡುಗಡೆ

ಆದ್ಯೋತ್ ಸಿನೇಮಾ ಸುದ್ದಿ:
ಭೈರವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣದ “ನುಡಿಮುತ್ತು” ಸಿನಿಮಾ ಸರ್ಕಾರಿ ಶಾಲೆಗಳಲ್ಲಿನ ಸೌಲಭ್ಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯವಶ್ಯಕ ಎಂಬುದರ ಕುರಿತು “ನುಡಿಮುತ್ತು” ಸಿನಿಮಾ ಮೂಲಕ ತಿಳಿಸುವ ಉದ್ದೇಶ ನಮ್ಮ ಚಿತ್ರ ತಂಡದ್ದು ಎಂದು ಬಾಲನಟಿ ಭೈರವಿ ಅವರು ಹುಬ್ಬಳ್ಳಿಯಲ್ಲಿ “ನುಡಿಮುತ್ತು” ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು.

ನನ್ನ ತಂದೆ ಸರ್ಕಾರಿ ಶಾಲೆಯಲ್ಲಿಯೇ ಓದಿದವರು, ನನ್ನನ್ನು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ. ರಾತ್ರಿ ನಿದ್ದೆಗೆಟ್ಟು ಮುದ್ರಾಣಾಲಯದಿಂದ ಪತ್ರಿಕಾ ಪ್ರತಿನಿಧಿಗಳಿಗೆ ಪತ್ರಿಕೆ ತಲುಪಿಸಿ ನಂತರ ಮನೆಮನೆಗೆ ಪತ್ರಿಕೆ ಹಂಚಿ ನನ್ನನ್ನು ಈ ಸ್ಥಾನಕ್ಕೆ ತರಲು ಅವಿರತ ಪ್ರಯತ್ನ ಪಟ್ಟಿದ್ದಾರೆ. ನಾನು ಡ್ರಾಮಾ ಜ್ಯೂನಿಯರ್ ಸೀಸನ್ ೪ರ ಫೈನಲಿಸ್ಟ್ ಹಾಗೂ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯ “ಯಲ್ಲಮ್ಮ” ಪಾತ್ರಧಾರಿಯಾಗಿ ೪೫೦ ಸಂಚಿಕೆಯಲ್ಲಿ ಅಭಿನಯ ಕೂಡ ಮಾಡಿರುವೆ ಎಂದರು.
ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹ ಮತ್ತು ಸರ್ಕಾರಿ ಶಾಲೆಗಳ ನಿರ್ಲಕ್ಷ್ಯ ದಿಂದಾಗಿ ಇಂದು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುತ್ತಿವೆ. ರಾಜ್ಯ ಸರ್ಕಾರ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದವರಿಗೆ ಮಾತ್ರ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ನೌಕರರು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವವರ ಮಕ್ಕಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕೆಂಬ ನಿಯಮ ಜಾರಿಗೆ ತಂದರೆ ಸರ್ಕಾರಿ ಶಾಲೆಗಳು ತಂತಾನೇ ಅಭಿವೃದ್ಧಿ ಆಗುವುದರ ಜೊತೆಗೆ ಉಳಿಯುತ್ತವೆ ಎಂದು ನಿರ್ದೇಶಕ ಕಾರ್ತಿಕ್ ರಾಂ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಓದಿ ಹೆಸರು ಮಾಡಿದ, ಕುವೆಂಪು, ಅಬ್ದುಲ್ ಕಲಾಂ ಅವರು ನಮಗೆ ಸ್ಫೂರ್ತಿಯಾಗಬೇಕು. ಅಂತಹ ಮಹನೀಯರು ಓದಿದಂತಹ ಸರ್ಕಾರಿ ಶಾಲೆಗಳ ಬಗ್ಗೆ ನಮ್ಮ ಜನರು ಏಕಿಷ್ಟು ನಿರ್ಲಕ್ಷ್ಯ ಮಾಡುತ್ತಿರುವರೋ ತಿಳಿಯದಾಗಿದೆ. ಚಿತ್ರದಲ್ಲಿ ಶಿಕ್ಷಣ, ಸರ್ಕಾರಿ ಶಾಲೆಯ ಕುರಿತು ೩ ಹಾಡುಗಳಿವೆ ಎಂದು ಕಲಾವಿದರಾದ ಸೂರ್ಯ ಪಿ.ಜೆ ತಿಳಿಸಿದರು. ಕಲಾವಿದರಾದ ವಿನಾಯಕ ಕುಲಕರ್ಣಿ ,ಛಾಯಾಗ್ರಾಹಕ ಮೈಸೂರು ಸೋಮು ಚಿತ್ರದ ಕುರಿತು ಅನಿಸಿಕೆ ಹಂಚಿಕೊಂಡರು.
ಸಹ ನಿರ್ಮಾಪಕ ಹುಲುಕುಂಟೆ ಮಹೇಶ್ ಮಾತನಾಡಿ ಬಾಲನಟಿ ಭೈರವಿ ಮಹೇಶ್,ನೊಣವಿನಕೆರೆ ರಾಮಕೃಷ್ಣಯ್ಯ, ಕುರಿ ಗಂಗು ಕುರಿ ಭುವನ, ಸೂರ್ಯ ಪಿ ಜೆ, ಅರ್ವಿನ್ ರಾಜ್, ಪ್ರಜ್ವಲ್, ಕೋಬ್ರಾ ನಾಗರಾಜ್, ಯಶೋದಮ್ಮ, ತ್ರಿವೇಣಿ, ಗನಿಕ, ಲಿಖಿತ ಅವರು ನಟಿಸಿದ್ದು ಪೋಷಕ ಪಾತ್ರಗಳಲ್ಲಿ ಸಹ ಕಲಾವಿದರಾದ ಶ್ರೀನಿಧಿ ಭಟ್ , ರಾಜೇಶ್ವರಿ, ಏಕನಾಥ್, ನವ್ಯಶ್ರೀ, ವಿನಾಯಕ ಕುಲಕರ್ಣಿ,ಈ ಚೇತನ್, ಅಭಿಜಿತ್ , ಸಂದರ್ಶ, ಅನು ಶೆಟ್ಟಿ ಅವರು ನಟಿಸಿದ್ದಾರೆ. ಕಥೆ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದು , ಸಿನಿಮಾದ ಸಂಪೂರ್ಣ ಚಿತ್ರೀಕರಣ ಗ್ರಾಮೀಣ ಪ್ರದೇಶಗಳಾದ ತುಮಕೂರು ಜಿಲ್ಲೆಯ ಹುಲಿಯೂರು ದುರ್ಗ, ಮಂಡ್ಯದ ಕೆರೆಗೋಡು, ಚನ್ನಪಟ್ಟಣದ ಕೋಡಂಬಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವತಿ ಮತ್ತು ಮಂಡಿಗೆಯಲ್ಲಿ ನಡೆದಿದ್ದು, ಚಿತ್ರಕ್ಕೆ ಶಿವಸತ್ಯ ಸಂಗೀತ ಸಂಯೋಜನೆ , ಹರಿಚರಣ್ ಧ್ವನಿಮುದ್ರಣ ಕಾರ್ಯ ,ಅಭಿಷೇಕ್ ಅವರ ಸಂಕಲನವಿದೆ. ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿಯವರ ಪತ್ರಿಕಾ ಸಂಪರ್ಕವಿದೆ. ನಾನೊಬ್ಬ ಪತ್ರಿಕಾ ವಿತರಕನಾಗಿಯೂ ಜನರಿಗೆ ಒಂದು ಸದಭಿರುಚಿಯ ಸಿನಿಮಾ ನೀಡುತ್ತಿರುವ ತೃಪ್ತಿ ನನಗೆ ಮತ್ತು ನಿರ್ಮಾಪಕರಾದ ಗೀತಾ.ಎ.ವಿ. ಮನೋಜ್ ಬಾಬು ಅವರಿಗಿದೆ ಎಂದರು.
ಈ ಸಂದರ್ಭದಲ್ಲಿ ನುಡಿಮುತ್ತು ಚಲನಚಿತ್ರದ ಕಲಾವಿದರು,ತಂತ್ರಜ್ಞರು ಉಪಸ್ಥಿತರಿದ್ದರು.

About the author

Adyot

Leave a Comment