ಆದ್ಯೋತ್ ಸುದ್ದಿನಿಧಿ:
ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಅಕ್ಷತಾ ಆಶಯ ಅಂಬಳ್ಳಿ(೨೭) ಮೃತಪಟ್ಟಿದ್ದು ಗುರುವಾರ ಸಿದ್ದಾಪುರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಸರಕಾರದವತಿಯಿಂದ ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ,ತಹಸೀಲ್ದಾರ ಮಧುಸೂದನ ಕುಲಕರ್ಣಿ ಭಾಗವಹಿಸಿದ್ದರು. ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಮಡಿವಾಳ,ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಕೆ.ಜಿ.ನಾಗರಾಜ,ಪಪಂ ಸದಸ್ಯರಾದ ಕೆ.ಜಿ.ನಾಯ್ಕ ಹಣಜೀಬೈಲ್,ಗುರುರಾಜ ಶಾನಭಾಗ,ವಿಜೇಂದ್ರ ಗೌಡರ್,ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್,ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್ ಮುಂತಾದವರು ಅಂತಿಮ ದರ್ಶನ ಪಡೆದರು.
ಅಕ್ಷತಾ ಅಂಬಳ್ಳಿ ಚಾರ್ಟೆಡ್ ಅಕೌಂಟೆಂಟ್ ಆಗಿಯೂ ಇವರ ಪತಿ ಆಶಯ ಅಂಬಳ್ಳಿ ಸಾಪ್ಟ್ವೇರ್ ಇಂಜನೀಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಕೇವಲ ಒಂದು ವರ್ಷವಾಗಿದ್ದ ಈ ದಂಪತಿಗಳು ಆರ್ಸಿಬಿ ತಂಡದ ಅಭಿಮಾನಿಗಳಾಗಿದ್ದರು. ಉಡುಪಿ ಜಿಲ್ಲೆಯ ಮೂಲ್ಕಿ ಅಕ್ಷತಾರ ತವರು ಮನೆ. ಗೆಲುವಿನ ತಂಡದ ಆಟಗಾರರನ್ನು ಕಣ್ಣೆದುರು ನೋಡಬೇಕು ಎಂಬ ಅಭಿಲಾಷೆಯಿಂದ ಕೆಲಸಕ್ಕೆ ರಜಾ ಹಾಕಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು ಆದರೆ ವಿಧಿ ಅಕ್ಷತಾರ ಪಾಲಿಗೆ ಮೃತ್ಯವಾಗಿ ಬಂದಿತ್ತು.
ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಆಶಯ ರಂಜನ ಅಂಬಳ್ಳಿ, ಆರ್ಸಿಬಿ ತಂಡದ ವಿಜಯದ ಮೆರವಣಿಗೆ ಇದೆ ಎಂದು ಆರ್ಸಿಬಿ ಇನ್ಸ್ಟಾಗ್ರಾಂ ಪೇಜ್ನಿಂದ ತಿಳಿದು ನಾನು ಮತ್ತು ನನ್ನ ಹೆಂಡತಿ ಹೋಗಲು ತೀರ್ಮಾನಿಸಿದೆವು. ನಾವಿಬ್ಬರೂ ಅರ್ಧದಿನದ ರಜೆ ಪಡೆದು ಆರ್ಸಿಬಿ ಜೆರ್ಸಿ ತೆಗದುಕೊಂಡು ಹೋಗಿದ್ದೆವು ಅಲ್ಲಿ ಹೋದಮೇಲೆ ಮೆರವಣಿಗೆ ಇಲ್ಲ ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವಿನ ಆಚರಣೆ ಇರುತ್ತದೆ ಇದಕ್ಕೆ ಉಚಿತ ಪ್ರವೇಶ ಇದೆ ಎಂದು ತಿಳಿಯಿತು ೩-೩೦ ರಿಂದ ೪-೦೦ ಗಂಟೆ ಆಗಿರಬಹುದು ಗೇಟ್ನಂ.೧೭ರಲ್ಲಿ ಜನಸ್ವಲ್ಪ ಇದ್ದರು ನಾವು ಅಲ್ಲಿಂದ ಪ್ರವೇಶ ಮಾಡಲು ಹೋದೆವು ಯಾವಾಗ ಗೇಟ್ ಸ್ವಲ್ಪ ಓಪನ್ ಆಯಿತೋ ಜನರು ನುಗ್ಗಿದರು ನಾನು ಬ್ಯಾರಿಕೆಡ್ ಸಮೀಪ ಇದ್ದೆ ಜನರ ತಳ್ಳಾಟದಲ್ಲಿ ನಾವಿಬ್ಬರು ಕೆಳಗಡೆ ಬಿದ್ದೆವು ನಮ್ಮ ಮೇಲೆ ಒಂದಿಷ್ಟು ಜನರು ಬಿದ್ದರು ನಾನು ಸಹಾಯಕ್ಕೆ ಕೂಗಿದಾಗ ಯಾರೋ ನನ್ನನ್ನು ಎಳೆದು ಪಕ್ಕಕ್ಕೆ ತಳ್ಳಿದರು ಈ ಸಂದರ್ಭದಲ್ಲಿ ನನ್ನ ಹೆಂಡತಿಯ ಕೈತಪ್ಪಿ ಹೋಯಿತು. ನಾನು ಹೆಂಡತಿಯನ್ನು ಹುಡುಕಲು ಪ್ರಾರಂಭಿಸಿದೆ ಆದರೆ ಜನಸಾಗರದಲ್ಲಿ ನನಗೆ ಅವಳು ಸಿಗಲಿಲ್ಲ. ಟ್ರಾಪಿಕ್ ಪೊಲೀಸ್ರು ಅಲ್ಲಿದ್ದರು. ನನ್ನ ಕಣ್ಣೇದುರೇ ವ್ಯಕ್ತಿಯೊಬ್ಬನ ಪ್ರಾಣ ಹೋಗಿತ್ತು. ಪೊಲೀಸ್ರಲ್ಲಿ ನಾನು ನನ್ನ ಹೆಂಡತಿಯ ಬಗ್ಗೆ ವಿಚಾರಿಸಿದೆ ಒಂದಿಷ್ಟು ಜನರನ್ನು ವೈದೇಹಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಬಂದು ನಾನು ಆಸ್ಪತ್ರೆಗೆ ಹೋದೆ. ಅಲ್ಲಿ ಇರಲಿಲ್ಲ ನಾನು ಬೆಂಗಳೂರಿನಲ್ಲೆ ಇರುವ ನನ್ನ ಹೆಂಡತಿಯ ತಂಗಿ ಹಾಗೂ ಕಸಿನ್ಗೆ ಫೋನ್ ಮಾಡಿದೆ ಅವರು ಬಂದು ಎಲ್ಲರೂ ಸೇರಿ ಬೇರೆ ಬೇರೆ ಆಸ್ಪತ್ರೆಯಲ್ಲಿ ಹುಡುಕಾಟ ಮಾಡಿದೆವು ಕೊನೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ಹೋಗಿ ವಿಚಾರಿಸಿದೆವು ಅಲ್ಲಿ ನನ್ನ ಪತ್ನಿಯ ಶವವಿತ್ತು ವೈದ್ಯರು ಇವರನ್ನು ಆಸ್ಪತ್ರೆಗೆ ತರುವ ಮೊದಲೇ ಮೃತಪಟ್ಟಿದ್ದರು ಎಂದು ತಿಳಿಸಿದರು. ಘಟನೆಯ ಬಗ್ಗೆ ದುಃಖತಪ್ತರಾಗಿಯೇ ಆಶಯ ವಿವರಿಸಿದರು.
ಆಶಯ ತಂದೆ ರಂಜನ ಅಂಬಳ್ಳಿ ಮಾತನಾಡಿ, ಕಾಲ್ತುಳಿತದ ಕುರಿತುಟಿವಿಯಲ್ಲಿ ಸುದ್ದಿ ಬರುತ್ತಿರುವುದನ್ನು ನೋಡಿ ನಾನು ನನ್ನ ಮಗ ಹಾಗೂ ಸೊಸೆಗೆ ಫೋನ್ ಮಾಡುತ್ತಿದ್ದೆ ಆದರೆ ಅವರು ರಿಸೀವ್ ಮಾಡಲಿಲ್ಲ. ಬಹಳ ಹೊತ್ತಿನ ನಂತರ ರಿಸಿವ್ ಮಾಡಿ ವಿಷಯ ತಿಳಿಸಿದಾಗ ನಾನು ಕುಸಿದು ಹೋದೆ.