ವಿವಿಧ ಸಂಘಟನೆಗಳಿಂದ ಕರಿಅಪ್ಪೆ ಸಸಿಗಳ ಹಸ್ತಾಂತರ,ನರ್ಸರಿ ಸಿಬ್ಬಂದಿಗೆ ಸನ್ಮಾನ

ಆದ್ಯೋತ್ ಸುದ್ದಿನಿಧಿ:
ಸ್ಥಳೀಯ ಭಾರತೀ ಸಂಪದ, ಸಂಸ್ಕøತಿ ಸಂಪದ ಹಾಗೂ ಪ್ರಯೋಗ ಸ್ವಯಂಸೇವಾ ಸಂಸ್ಥೆ ಸಹಯೋಗದಲ್ಲಿ ಕಸಿ ಮಾಡಿ ಬೆಳೆಸಿದ ಅಪರೂಪದ ಕಣಸಿ ಕರಿ ಅಪ್ಪೆ ಸಸಿಗಳ ಹಸ್ತಾಂತರ ಹಾಗೂ ನರ್ಸರಿ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಪಟ್ಟಣದ ಹೊಸೂರಿನ ಅರಣ್ಯ ಇಲಾಖೆ ನರ್ಸರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಪರಿಸರ ಹಾಗೂ ಸಸ್ಯ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಗಣಪತಿ ಹೆಗಡೆ ವಡ್ಡಿನಗದ್ದೆಯವರ ಕಾರ್ಯ ಮಾದರಿಯಾದದ್ದು. ಮರೆಯಾಗುತ್ತಿರುವ ಅಪರೂಪದ ಸಸ್ಯಗಳ ಬೀಜ ಸಂಗ್ರಹಣೆ, ಅವುಗಳ ಪೋಷಣೆ, ಅವನ್ನು ನೆಟ್ಟು ಬೆಳೆಸುವ ಕಾರ್ಯದ ಮೂಲಕ ಹಲವು ಸಸ್ಯಗಳನ್ನು ಸಂರಕ್ಷಿಸಿದ್ದಾರೆ. ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಇಂಥ ಉತ್ತಮ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ಪ್ರಯೋಗ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ, ಪರಿಸರ ರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬನ ಜವಾಬ್ದಾರಿ. ಅರಣ್ಯ ಇಲಾಖೆಯ ಜೊತೆ ಪರಿಸರ ಮತ್ತು ಅರಣ್ಯ ರಕ್ಷಣೆಯ ಕಾರ್ಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದಾಗ ಉತ್ತಮ ಪರಿಸರ ರೂಪುಗೊಳ್ಳುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಪರಿಸರದ ಕುರಿತಾಗಿ ಕಾಳಜಿ ಇರುತ್ತದೆ. ಅವರನ್ನು ಋಣಾತ್ಮಕವಾಗಿ ಕಾಣುವದು ಸರಿಯಲ್ಲ.ಕಳೆದ ಎರಡು ದಶಕಗಳಿಂದ ಸ್ವಯಂಸ್ಪೂರ್ತಿಯಿಂದ ನಶಿಸುತ್ತಿರುವ ಅಪರೂಪದ ಸಸ್ಯಗಳ ಬೀಜ ಸಂಗ್ರಹ, ಅವುಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಗಣಪತಿ ಹೆಗಡೆ ಸ್ವಂತ ವೆಚ್ಚದಲ್ಲಿ ಇವನ್ನೆಲ್ಲ ನಿರ್ವಹಿಸುತ್ತ ಬಂದಿದ್ದಾರೆ. ಅವರಿಗೆ ಇನ್ನಷ್ಟು ಶಕ್ತಿ ದೊರಕಲಿ ಎಂದರು.

ಪ್ರಾಸ್ತಾವಿಕ ಮಾತನಾಡಿದ ಗಣಪತಿ ಹೆಗಡೆ ವಡ್ಡಿನಗದ್ದೆ ಭಾರತೀ ಸಂಪದದ ದಶಮಾನೋತ್ಸವ ಸಂದರ್ಭದಲ್ಲಿ ಸುಮಾರು ಮುನ್ನೂರು ವರ್ಷಗಳ ಹಳೆಯದಾದ ಕಣಸಿಯ ಕರಿ ಅಪ್ಪೆ ಮರದ ಗೆಲ್ಲುಗಳಿಗೆ ಕಸಿ ಮಾಡಿ, ಆ ಗಿಡಗಳನ್ನು ನರ್ಸರಿಯಲ್ಲಿ ಬೆಳೆಸಿ, ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುತ್ತಿದ್ದೇನೆ. ಈ ಹಿಂದೆ ಅರಣ್ಯ ಇಲಾಖೆ ಹಾಗೂ ಇನ್ನಿತರರ ಸಹಕಾರ ದೊರಕಿದೆ. ಇಲಾಖೆಯ ನರ್ಸರಿಯಲ್ಲಿ ಕಾರ್ಯನಿರ್ವಹಿಸುವ ಓರ್ವ ಸಿಬ್ಬಂದಿಯನ್ನು ಪ್ರತಿವರ್ಷ ಸನ್ಮಾನಿಸುತ್ತ ಬಂದಿದ್ದೇವೆ. ಈ ಬಾರಿ ಓರ್ವ ಅನುಭವಿ ಸಿಬ್ಬಂದಿ ಪಾಂಡು ಮೇಸ್ತರನ್ನು ಗೌರವಿಸುತ್ತಿದ್ದೇವೆ ಎಂದರು.
ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ಹೊಸುರು ನರ್ಸರಿಯ ಸಿಬ್ಬಂದಿ ಪಾಂಡು ಮೇಸ್ತರನ್ನು ಸನ್ಮಾನಿಸಿದರು. ಆರ್.ಎಪ್.ಓ. ಶಿವಾನಂದ ನಿಂಗಾಣಿ, ಉದ್ಯಮಿ ಆರ್.ಎಸ್.ಭಟ್ಟ ಕಲ್ಲಾಳ, ಡಿ.ಆರ್.ಎಪ್.ಓಗಳಾದ ಮಂಜುನಾಥ ಚಿನ್ನಣ್ಣನವರ್, ವಿನಾಯಕ ಮಡಿವಾಳ, ಮಂಜುನಾಥ ಹುಲ್ಲೂರು, ಅಶೋಕ ಪೂಜಾರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಇಲಾಖೆಯ ತಾಲೂಕಿನ ವಿಭಾಗಗಳಿಗೆ ಸಾಂಕೇತಿಕವಾಗಿ ಕಣಸಿ ಕಸಿ ಅಪ್ಪೆ ಸಸಿಗಳನ್ನು ವಿತರಿಸಲಾಯಿತು. ಹೊಸೂರು ನರ್ಸರಿಯಲ್ಲಿ ಕೆಲವು ಸಸಿಗಳನ್ನು ನೆಡಲಾಯಿತು.
#####

About the author

Adyot

Leave a Comment