ಆದ್ಯೊತ್ ಸುದ್ದಿನಿಧಿ:
ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಕಳವಳ ವ್ಯಕ್ತಪಡಿಸಿದೆ.

ಪ್ರತಿಭಟನಾ ನಿರತ ನಾಯಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಕೇಂದ್ರ ಸರ್ಕಾರ ನಿರಾಕರಿಸಿರುವುದು ಅದರ ಸಂವೇದನಾಶೂನ್ಯತೆ ಮತ್ತು ಸರ್ವಾಧಿಕಾರಶಾಹೀ ಸ್ವಭಾವವನ್ನು ಎತ್ತಿ ತೋರಿಸುತ್ತದೆ. ಸೋರಿಕೆ ನಿರೋಧಕ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರದ ವಿಫಲತೆಯ ಬೇರುಗಳು ರಾಷ್ಟ್ರೀಯ ಶಿಕ್ಷಣ ನೀತಿ, ಎನ್ಇಪಿ 2020 ರಲ್ಲಿವೆ. ಎನ್ಇಪಿ ಉತ್ತೇಜಿಸುವ ಶಿಕ್ಷಣ ವ್ಯವಸ್ಥೆಯ ಕೇಂದ್ರೀಕರಣ ಮತ್ತು ವ್ಯಾಪಾರೀಕರಣವು ತರಬೇತಿ ಉದ್ಯಮವು ನಾಯಿಕೊಡೆಯಂತೆ ಬೆಳೆಯಲು ಕಾರಣವಾಗುತ್ತಿದೆ. ಕೋಮುವಾದೀಕರಣದ ಜೊತೆಗೆ, ಇದು ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಎಲ್ಲಾ ರೀತಿಗಳ ಅಕ್ರಮಗಳಿಗೆ ಮೂಲ ಕಾರಣವಾಗಿದೆ ಎಂದಿರುವ ಸಿಪಿಐ(ಎಂ) ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು, ಎನ್ಟಿಎ ಮತ್ತು ಎನ್ಇಪಿ 2020 ಅನ್ನು ರದ್ದುಗೊಳಿಸಬೇಕು ಎಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.

ಸೋನಮ್ ವಾಂಗ್ಚುಕ್ ಮತ್ತು ಇತರ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಒಂದಾಗಿ ನಿಲ್ಲಬೇಕು ಎಂದು ಪೊಲಿಟ್ ಬ್ಯುರೊ ತನ್ನ ಎಲ್ಲಾ ಘಟಕಗಳು ಮತ್ತು ಕಾಳಜಿಯಿರುವ ನಾಗರಿಕರಿಗೆ ಕರೆ ನೀಡಿದೆ. ಈ ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಸೋನಮ್ ವಾಂಗ್ಚುಕ್ ರವರಿಗೆ ಸೌಹಾರ್ದ ವ್ಯಕ್ತಪಡಿಸಲು ಜುಲೈ 20 ರಂದು ದೇಶಾದ್ಯಂತ ಪ್ರತಿಭಟನೆಗಳನ್ನು ಸಂಘಟಿಸಲಾಗುವುದು ಎಂದು
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
