ಆದ್ಯೋತ್ ಸುದ್ದಿನಿಧಿ:
ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ಗಾಂಧಿ ಚಿತ್ರದುರ್ಗದ ಮುರುಘಾಮಠಕ್ಕೆ ಬುಧವಾರ ಭೇಟಿ
ನೀಡಿ ಡಾ. ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದು, ೫೦ಕ್ಕು ಹೆಚ್ಚು ಸ್ವಾಮೀಜಿಗಳೊಂದಿಗೆ
ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಬಸವಣ್ಣನವರು ತಮ್ಮ ಮನೆಯನ್ನು ಬಿಟ್ಟು
ಹೊರಬಂದಿದ್ದು ಹೆಣ್ಣುಮಕ್ಕಳಿಗೆ ಸಮಾನತೆ ಸಿಗಲಿಲ್ಲವೆಂಬ ಕಾರಣಕ್ಕೆ. ಪ್ರಪಂಚದ ಮೊದಲ ಸಂಸತ್ ಅನುಭವ
ಮಂಟಪವನ್ನು ತೆರೆದು ಸಮಾನತೆಯ ತತ್ವ ಸಿದ್ಧಾಂತವನ್ನು ತಂದರು. ಸರ್ವತೋಮುಖ ಅಭಿವೃದ್ಧಿಗೆ ಸಮಸಮಾಜದ
ಕಲ್ಪನೆಯನ್ನು ತಂದರು. ಮಾನವೀಯತೆಯನ್ನು ಬಸವಣ್ಣನವರು ಹೇಳಿದರು. ದಯವೇ ಧರ್ಮದ ಮೂಲವೆಂದರು.
ಕಾಯಕ ದಾಸೋಹ ಸಿದ್ಧಾಂತಕ್ಕೆ ಹೆಚ್ಚಿನ ಮಹತ್ವ ನೀಡಿದರು. ಕಾಯಕದಲ್ಲಿ ಪ್ರಾಮಾಣಿಕತೆ, ನಿಷ್ಠೆ ಇರಬೇಕು ಎಂದರು.
ಶಾಂತಿ ಹಾಗು ಪಾರದರ್ಶಕ ಆಡಳಿತಕ್ಕೆ ಒತ್ತು ಕೊಟ್ಟರು. ಶ್ರದ್ಧೆ ಇಲ್ಲದಿದ್ದರೆ ಯಾವ ಕೆಲಸವೂ ಪರಿಪೂರ್ಣ ಆಗುವುದಿಲ್ಲ
ಎಂದು ಹೇಳಿದರು.
ರಾಹುಲ್ಗಾಂಧಿಯವರು ಇಷ್ಟಲಿಂಗದ ಬಗ್ಗೆ ಪ್ರಶ್ನಿಸಿ ಶ್ರೀಗಳೊಡನೆ ಸಂವಾದ ನಡೆಸಿದರು.
ನೀವು ಯಾವ ಸಿದ್ಧಾಂತವನ್ನು ಪ್ರಚುರಪಡಿಸುತ್ತೀರಿ.
ಸ್ವಾಮೀಜಿ – ನಮ್ಮದು ಬಸವತತ್ವ ಸಿದ್ಧಾಂತ
ಬಸವಣ್ಣನವರು ಜಗತ್ತಿಗೆ ಏನನ್ನು ಬೋಧನೆ ಮಾಡಿದರು?
ಸ್ವಾಮೀಜಿ – ಬಸವಣ್ಣನವರು ಜಗತ್ತಿಗೆ ಕಾಯಕ, ಸಾಮಾಜಿಕ ಸಮಾನತೆ, ದಾಸೋಹ ಪರಿಕಲ್ಪನೆಯ ಮೂಲಕ
ಮಾನವರೆಲ್ಲ ಒಂದು. ಮಾನವ ಪ್ರೀತಿ, ಜೀವ ಪ್ರೀತಿಯನ್ನು ಬಿತ್ತಿದರು.
ನೀವು ಯಾವ ಪೂಜೆ ಮಾಡುತ್ತೀರಿ?
ಸ್ವಾಮೀಜಿ – ನಾನು ಇಷ್ಟಲಿಂಗ ಪೂಜೆ ಮಾಡುತ್ತೇನೆ.
ಇಷ್ಟಲಿಂಗ ಪೂಜೆ ವಿಧಾನ ತಿಳಿಸಿಕೊಡುತ್ತೀರಾ?
ಸ್ವಾಮೀಜಿ, ಇಷ್ಟಲಿಂಗ ಪೂಜೆ (ಶಿವಯೋಗದ) ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಶ್ರೀಗಳು ಇಷ್ಟಲಿಂಗ ಧ್ಯಾನ ಮಾಡಿದುದನ್ನು ತದೇಕಚಿತ್ತದಿಂದ ಸುಮಾರು ೨೫ ನಿಮಿಷಗಳ ಕಾಲ ಆಲಿಸಿದರು. ನಂತರ ಶ್ರೀಗಳು ಅವರಿಗೆ
ವಿಭೂತಿಧಾರಣೆ ಮಾಡಿ ಲಿಂಗದೀಕ್ಷೆ ನೀಡಿ ಈಗ ನೀವು ಬಸವ ಭಕ್ತರಾಗಿದ್ದೀರಿ ಎಂದು ಸಂತಸಪಟ್ಟರು.
ನಂತರ ಮಾತನಾಡಿದ ರಾಹುಲ್ಗಾಂಧಿ, ನನಗೆ ಬಸವಣ್ಣನವರ ಬಗ್ಗೆ ಒಂದಿಷ್ಟು ಪರಿಚಯ ಇದೆ. ತಾವು ಯಾರನ್ನಾದರೂ
ಕಳುಹಿಸಿದರೆ ಸಹಜ ಶಿವಯೋಗವನ್ನು ಕಲಿಯುತ್ತೇನೆ ಎಂದರು. ನಂತರ ಶ್ರೀಗಳು ರಾಹುಲ್ ಗಾಂಧಿಯವರಿಗೆ
ಬಸವಣ್ಣನವರ ಭಾವಚಿತ್ರ ನೀಡಿ ಶಾಲು ಹೊದಿಸಿ ಗೌರವಿಸಿದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಇದೊಂದು ಐತಿಹಾಸಿಕ ಮಠ. ಶ್ರೀಗಳಿಗೆ ಹೇಗೆ ದೀಕ್ಷೆ ಕೊಟ್ಟರೊ
ಹಾಗೆ ರಾಹುಲ್ ಗಾಂಧಿಯವರಿಗೆ ಇಷ್ಟಲಿಂಗ ದೀಕ್ಷೆ ನೀಡಿದ್ದಾರೆ. ರಾಹುಲ್ ಗಾಂಧಿಯವರು ಈ ಮಠಕ್ಕೆ ಬರಬೇಕು
ಎಂದು ಬಹಳ ದಿನದಿಂದ ಹೇಳುತ್ತಿದ್ದರು. ಅನೇಕ ಸಮುದಾಯದವರಿಗೆ ದೀಕ್ಷೆ ಕೊಟ್ಟಿರುವುದು ಅವರಿಗೆ ಖುಷಿ ಕೊಟ್ಟಿದೆ.
ಸೋನಿಯಾಗಾಂಧಿ, ರಾಜೀವಗಾಂಧಿ ಅವರು ಈ ಮಠದ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ನಮ್ಮ ಪಕ್ಷದಿಂದ ಶ್ರೀಮಠ ಮೊದಲಾಗಿ
ಯಾವುದೇ ಮಠಗಳಿಗೆ ಯಾವುದೇ ಸಂದರ್ಭದಲ್ಲಿ ನೋಯಿಸಿರುವುದಿಲ್ಲ. ಇದು ನಮ್ಮ ತತ್ವ ಸಿದ್ಧಾಂತ. ಮುಂದೆ ಭಾರತ ಜೋಡೋ ಕಾರ್ಯಕ್ರಮ ಬರುವಾಗ ಎಲ್ಲರೂ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತೇವೆ. ಇದೊಂದು ಪವಿತ್ರವಾದ ಸಂದರ್ಭ. ಇದು ನಮ್ಮ ಭಾಗ್ಯ ಎಂದರು.
ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಮಾತನಾಡಿ, ನಾವೆಲ್ಲ ಸೇರಿ ಪರಿಶಿಷ್ಟ ಜಾತಿ ಮತ್ತು
ಪಂಗಡದ ೨ ಕೋಟಿ ಜನರಿಗೆ ಮೀಸಲಾತಿ ಸಿಗಬೇಕು ಎಂದರಲ್ಲದೆ, ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ನಮ್ಮ
ಸಮುದಾಯಕ್ಕೆ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ಕೊಟ್ಟು ಸಾಮಾಜಿಕ ಸ್ಥಾನ ಒದಗಿಸಿದ್ದರು ಎಂದು ಸ್ಮರಿಸಿದರು
ಈ ಸಂದರ್ಭದಲ್ಲಿ ಮೂರು ಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ,ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ,ಸವಣೂರು ದೊಡ್ಡಹುಣಸೆಮಠದ ಶ್ರೀಚನ್ನಬಸವ ಸ್ವಾಮೀಜಿ,ಹೆಬ್ಬಾಳು ಶ್ರೀ ಮಹಂತೇಶ ರುದ್ರೇಶ್ವರ ಸ್ವಾಮೀಜಿ,ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ,ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮೀಜಿ,ದಾವಣಗೇರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ,ಗಂಗಾವತಿ ಕಲ್ಮಠದ ಸ್ವಾಮೀಜಿ,ಶ್ರೀ ಸಂಗಮೇಶ್ವರ ಸ್ವಾಮೀಜಿ,ಅಕ್ಕಿಮಠದ ಶ್ರೀಗುರುಲಿಂಗ ಸ್ವಾಮೀಜಿ,ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,ಯಾದವ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ,ಶ್ರೀ ಮರುಳ ಶಂಕರ ಸ್ವಾಮೀಜಿ,ತಿಳುವಳ್ಳಿಕಲ್ಮಠದ ಶ್ರೀ ಬಸವನಿರಂಜನ ಸ್ವಾಮೀಜಿ,ಬ್ಯಾಡಗಿ ಮುಪ್ಪಿನಸ್ವಾಮಿಮಠದಶ್ರೀಮಲ್ಲಿಕಾರ್ಜುನ ಸ್ವಾಮೀಜಿ,ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ,ಹಿರಿಯೂರು ಆದಿ ಜಾಂಬವಮಠದ ಶ್ರೀಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ,ಶರಣೆ ಮುಕ್ತಾಯಕ್ಕ,ಶರಣೆ ಅಕ್ಕನಾಗಮ್ಮ,ಶರಣೆ ಜಯದೇವಿ ತಾಯಿ,ಶರಣೆ ಚಿನ್ಮಯಿ ತಾಯಿ,ಶರಣೆ ರಾಜೇಶ್ವರಿ ತಾಯಿ,ಸೇರಿದಂತೆ 50ಕ್ಕೂ ಹೆಚ್ಚು ಸ್ವಾಮೀಜಿಗಳು ಉಪಸ್ಥಿತರಿದ್ದರು
ಕಾಂಗ್ರೆಸ್ ಪಕ್ಷದ ಮುಖಂಡ ವೇಣುಗೋಪಾಲ,ರಘುಮೂರ್ತಿ,ಎಚ್.ಹನುಮಂತಪ್ಪ,ಬಿ.ಕೆ.ಹರಿಪ್ರಸಾದ,ಈಶ್ವರ ಖಂಡ್ರೆ,ಜಿಲ್ಲಾಧ್ಯಕ್ಷ ತಾಜ್ ಫೀರ್,ಸಲೀಂ ಅಹ್ಮದ್,ಬಿ.ಎನ್ಚಂದ್ರಪ್ಪ ಉಪಸ್ಥಿತರಿದ್ದರು