ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ಭಾರತೀಯ ಜನತಾ ಪಾರ್ಟಿ ನಗರ ಮಂಡಲದಿಂದ ಫಲಾನುಭವಿಗಳ ಸಮಾವೇಶ ಶನಿವಾರ ನಡೆಯಿತು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸರ್ವಸ್ಪರ್ಷಿಯಾಗುವಂತಹ ಯೋಜನೆಗಳನ್ನೇ ರೂಪಿಸುತ್ತಿದ್ದಾರೆ ಎಂದರು. ಅಂತ್ಯೋದಯದ ನೈಜ ಅನುಷ್ಠಾನ ಬಿಜೆಪಿ ಸರ್ಕಾರದ ಯೋಜನೆಗಳಿಂದ ಆಗುತ್ತಿದೆ, ಭಾರತವು ವಿಶ್ವದಲ್ಲಿ ಅತ್ಯಂತ ಹೆಚ್ಚು ಗೌರವವನ್ನು ಗಳಿಸುತ್ತಿರುವ ಕ್ಷಣಗಳಿಗೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಮೋದಿಯವರ ಜನ್ಮದಿನದಂದು ಆರಂಬಿಸಿರುವ ಸೇವಾ ಪಾಕ್ಷಿಕ ಕಾರ್ಯಕ್ರಮದ ಮೂಲಕ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಕೋವಿಡ್ ಲಸಿಕಾ ಅಭಿಯಾನ, ಸ್ವಚ್ಚತಾ ಕಾರ್ಯ, ಅಮೃತ ಸರೋವರದ ಮೂಲಕ ಕೆರೆ ಸ್ವಚ್ಚತೆ, ಆದರ್ಶ ಅಂಗನವಾಡಿ ಕಾರ್ಯಕ್ರಮ, ಗಿಡ ನೆಡುವ ಕಾರ್ಯಕ್ರಮ, ಸ್ವದೇಶಿ ವಸ್ತುಗಳ ಮಾರಾಟ ವ್ಯವಸ್ಥೆ, ಹೀಗೆ ಹಲವು ಜನಸ್ನೇಹಿ ಕಾರ್ಯಕ್ರಮಗಳು ಬಿಜೆಪಿಯಿಂದ ಆಗುತ್ತಿವೆ ಎಂದರು.
ಬಿಜೆಪಿ ಜಿಲ್ಲಾ ಸಹ ವಕ್ತಾರ ಸದಾನಂದ ಭಟ್ ಮಾತನಾಡಿ ಮುನ್ನೂರ ಎಪ್ಪತ್ತ ಆರು ಯೋಜನೆಗಳು ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅನುಷ್ಠಾನಕ್ಕೆ ಬಂದಿವೆ. ಮೋದಿಯವರ ದಕ್ಷ ಆಡಳಿತದ ಕಾರಣದಿಂದ ಯೋಜನೆಗಳ ತ್ವರಿತ ಹಾಗೂ ಸಮರ್ಪಕ ಅನುಷ್ಠಾನ ಸಾಧ್ಯವಾಗಿದೆ ಅದೇ ಆಡಳಿತ ಯಂತ್ರ – ಆದರೆ ಕಾರ್ಯಾಂಗಕ್ಕೆ ಮೋದಿಜೀ ಚುರುಕು ಮುಟ್ಟಿಸಿದ ಕಾರಣಕ್ಕೆ ಕಾರ್ಯ ಶೈಲಿಯಲ್ಲಿ ಬದಲಾವಣೆ ಸಾಧ್ಯವಾಗಿದೆ. ಆವಾಸ ಯೋಜನೆ, ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಹೇಳಿದ ಅವರು ಗರೀಬ್ ಕಲ್ಯಾಣ ಅನ್ನ ಯೋಜನೆ, ಉಚಿತ ಲಸಿಕಾ ಅಭಿಯಾನ, ಉಜ್ವಲಾ, ಆಯುಷ್ಮಾನ್ ಭಾರತ್, ಮುದ್ರಾ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು.
ನಗರ ಸಭೆಯ ಅಧ್ಯಕ್ಷ ಗಣಪತಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು, ನಗರ ಸಭೆಯ ಉಪಾಧ್ಯಕ್ಷ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ್ ಸಾಗರ್ ವೇದಿಕೆಯಲ್ಲಿದ್ದರು, ನಗರ ಸಭೆಯ ಸದಸ್ಯರಾದ ಶರ್ಮಿಳಾ ಮಾದನಗೇರಿ ಸ್ವಾಗತಿಸಿ ನಿರ್ವಹಿಸಿದರು. ನಗರ ಮಂಡಲದ ಅಧ್ಯಕ್ಷ ರಾಜೇಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ತಿರುಮಲೆ, ಜಗದೀಶ ನಾಯ್ಕ, ಯುವಮೋರ್ಚಾದ ರವಿಚಂದ್ರ ಶೆಟ್ಟಿ, ನಗರ ಸಭೆಯ ಸದಸ್ಯರು ಮತ್ತು ನೂರಕ್ಕೂ ಹೆಚ್ಚು ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಿದ್ದರು.