ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಸಿದ್ದಾಪುರ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ಮಾ.೩೦ರಂದು ಲೋಕಕಲ್ಯಾಣಾರ್ಥವಾಗಿ ಜರುಗಲಿರುವ ತ್ರಯೋದಶ ಕೋಟಿ ಶ್ರೀರಾಮತಾರಕಮಂತ್ರ ಜಪ ಯಜ್ಞದ ಮಂಗಲೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತಂತೆ ಪೂರ್ವಭಾವಿ ಸಭೆ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ಹಾಗೂ ವಿವಿಧ ಸಮಿತಿಗಳ ಮುಖ್ಯಸ್ಥರ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು,ಕಳೆದವರ್ಷ ನ.೧ರಿಂದ ತ್ರಯೋದಶ ಕೋಟಿ ಶ್ರೀರಾಮತಾರಕಮಂತ್ರ ಜಪಯಜ್ಞವನ್ನು ಆರಂಭಿಸಿದ್ದು ಎಲ್ಲರ ಸಹಕಾರದೊಂದಿಗೆ ೨೪ಕೋಟಿಗೂ ಹೆಚ್ಚು ಶ್ರೀರಾಮತಾರಕಮಂತ್ರ ಜಪವಾಗಿದೆ. ಈ ಜಪಯಜ್ಞದ ಮಂಗಲೋತ್ಸವದ ಕುರಿತಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲರೂ ಸ್ವಯಂಸ್ಪೂರ್ತಿಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ೧೩ಕುಂಡಗಳಲ್ಲಿ ಶ್ರೀರಾಮತಾರಕ ಹವನ, ಶ್ರೀರಾಮ ಪರಿವಾರಕ್ಕೆ ವಿಶೇಷ ಪೂಜೆ ನಡೆಯಲಿದ್ದು ಹೋಮಕುಂಡದ ನಿರ್ಮಾಣ ಕಾರ್ಯ ನಡೆದಿದೆ. ೨೫ಕ್ಕೂ ಹೆಚ್ಚು ಋತ್ವಿಜರು ಮತ್ತು ಸಹಾಯಕರು ಪಾಲ್ಗೊಳ್ಳಲಿದ್ದಾರೆ.
ಮಾ.೩೦ರ ಬೆಳಗ್ಗೆ ೮ರಿಂದ ಹವನ ನಂತರದಲ್ಲಿ ಪೂರ್ಣಾಹುತಿ ನಡೆಯಲಿದೆ. ನಂತರ ಧಾರ್ಮಿಕ ಸಭೆ ನಡೆಯಲಿದ್ದು ನರಹರಿ ಹೆಗಡೆ ಶಿರಳಗಿ ಅವರ ನೇತೃತ್ವದಲ್ಲಿ ಸತ್ಸಂಗ ಸಭೆ ನಡೆಯಲಿದ್ದು ಸಮಿತಿಯ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ್ಳಿದ್ದಾರೆ. ಈ ಸಂದರ್ಭದಲ್ಲಿ ಎರಡು ಧಾರ್ಮಿಕ ಗ್ರಂಥಗಳ ಬಿಡುಗಡೆ ನಡೆಯುವದು. ಭಜನೆ ಕಾರ್ಯಕ್ರಮದ ಸಿದ್ಧತೆ ನಡೆದಿದೆ. ಮಹಾ ಪ್ರಸಾದ, ಪ್ರಸಾದ ೧೫೦೦ ಮಂದಿಗೆ ಭೋಜನ ತಯ್ಯಾರಿ, ಊಟ. ಸಾಂಸ್ಕೃತಿಕ ಕಾರ್ಯಕ್ರಮದ ಸಿದ್ಧತೆಯಾಗಿದೆ. ವಾಹನ ನಿಲುಗಡೆ, ಕುಡಿಯುವ ನೀರು ಇನ್ನಿತರ ವ್ಯವಸ್ಥೆಯಾಗಿದೆ. ಹೋಮ ನಡೆಯುವ, ಸಭಾಕಾರ್ಯಕ್ರಮ ಮತ್ತು ಭೋಜನ ಸ್ಥಳಗಳಲ್ಲಿ ಪೆಂಡಾಲ್ ಹಾಕಲಾಗುತ್ತಿದೆ. ಮಹನೀಯರು, ಮಾತೆಯರು ತಾವೇ ಮುಂದಾಗಿ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿರುವದು ಸಂತೋಷ ತಂದಿದೆ ಎಂದರು.
ಸಭೆಯಲ್ಲಿ ವಿವಿಧ ಸಮಿತಿಗಳ ಪ್ರಮುಖರಾದ ಡಾ| ಕೆ.ವಿ.ಶಿವರಾಂ ಶಿರಸಿ,ಬಾಲಕೃಷ್ಣ ಕಾರಂತ ಶಿರಸಿ, ಶ್ರೀಕಾಂತ ಹೆಗಡೆ ಶಿರಸಿ,ಶೇಷಗಿರಿ ಭಟ್, ಶಿರಳಗಿ,ಆನಂದ ನಾಯ್ಕ ಹೊಸೂರು, ವೇ| ಶೇಷಗಿರಿ ಭಟ್ ಗುಂಜಗೋಡ, ವೇ|ಶ್ರೀಧರ ಭಟ್ಟ, ಶ್ರೀಧರ ಟಿ.ಭಟ್ ಶಿರಳಗಿ,ಸೋಮಶೇಖರ ಗೌಡರ್,ಶ್ರೀಕಾಂತ ಭಟ್ ಕೊಳಗಿ, ಸುಧೀರ ಬೆಂಗ್ರೆ ಮುಂತಾದವರಿದ್ದರು.
########
ಭಟ್ಕಳದಲ್ಲಿ 10ಕೆ.ಜಿ. ದಾಖಲೆ ಇಲ್ಲದ ಬೆಳ್ಳಿ ವಶ
ಭಟ್ಕಳದಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10ಕೆ.ಜಿ.ಬೆಳ್ಳಿಯನ್ನು ಪೊಲೀಸ್ ರು ವಶಪಡಿಸಿಕೊಂಡಿದ್ದಾರೆ.
ಭಟ್ಕಳ ಪುರವರ್ಗ ಚೆಕ್ ಪೋಸ್ಟ್ ನಲ್ಲಿ ತಪಾಸಣೆಯ ವೇಳೆ ಸಂಶಯಾಸ್ಪದವಾಗಿ ಕಂಡು ಬಂದ ಕಾರನ್ನು ಪರಿಶೀಲಿಸಿದಾಗ ಯಾವುದೇ ದಾಖಲೆಗಳಿಲ್ಲದ 10 ಕೆ.ಜಿ.ಗಿಂತ ಹೆಚ್ಚಿರುವ ಬೆಳ್ಳಿಕಂಡುಬಂದಿದೆ ತಕ್ಷಣವೇ ಪೊಲೀಸ್ ರು ಕಾರನ್ನು ವಶಪಡಿಸಿಕೊಂಡಿದ್ದು ಆರೋಪಿಗಳಾದ ಉಡುಪಿಯ ಮುಟಿ ನಿವಾಸಿ ಉಮೇಶ ಜನಾರ್ಧನ ಆಚಾರ್ಯ ಹಾಗೂ ಅಂಬಾಗಿಲು ಕುಕ್ಕುಟ ನಿವಾಸಿ ರವಿ ಶ್ರೀನ ಆಚಾರ್ಯ ಎನ್ನುವವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
7.50ಲಕ್ಷರೂ. ಮೌಲ್ಯದ 10.820ಕೆ.ಜಿ. ಬೆಳ್ಳಿಯ ವಸ್ತುಗಳನ್ನು ಗೋಕರ್ಣದ ದೇವಸ್ಥಾನಕ್ಕೆ ಒಯ್ಯಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ