ಆದ್ಯೋತ್ ಸುದ್ದಿನಿಧಿ:
ಇತ್ತೀಚೆಗಷ್ಟೆ ಸರಣಿ ಕಳ್ಳತನದ ರಹಸ್ಯವನ್ನು ಭೇದಿಸಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಮುಂಡಗೋಡು ಪೊಲೀಸ್ರು ಈಗ ಏಪ್ರಿಲ್ ತಿಂಗಳಲ್ಲಿ ನಡೆದ ಕೊಲೆಯ ರಹಸ್ಯವನ್ನು ಹೊರಗೆಡವಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಎಪ್ರಿಲ್ ತಿಂಗಳಿನಲ್ಲಿ ಮುಂಡಗೋಡು ತಾಲೂಕಿನ ಕಾತೂರು ಅರಣ್ಯ ಪ್ರದೇಶದಲ್ಲಿ ಅಲ್ಲಿಯ ಅರಣ್ಯ ರಕ್ಷಕರಿಗೆ ಬೀಟ್ ಸಂಚಾರಕ್ಕೆ ಹೋದಾಗ ದುರ್ವಾಸನೆಯ ಬರುತ್ತಿರುವುದನ್ನು ಕಂಡಾಗ ಅಲ್ಲಿ ಹೋಗಿ ನೋಡಿದಾಗ ಅಲ್ಲಿ ಕಾಡು ಪ್ರಾಣಿಗಳು ತಿಂದಿರುವ ಮಾನವ ದೇಹದ ಭಾಗವನ್ನು ಕಂಡು ಪೊಲೀಸ್ರಿಗೆ ವಿಷಯ ಮುಟ್ಟಿಸಿದ್ದರು.
ಮುಂಡಗೋಡು ಪೊಲೀಸ್ರು ಪ್ರಕರಣ ದಾಖಲಿಸಿಕೊಂಡಿದ್ದರು.
ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಅಪರಿಚಿತ ಶವ ಪತ್ತೆ ಹಾಗೂ ಕೊಲೆ ಪ್ರಕರಣ ಭೇದಿಸಲು ಮುಂಡಗೋಡು ಸಿಪಿಐ ಪ್ರಭುಗೌಡ ಡಿ.ಕೆ.ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.
ಪ್ರಾಣಿಗಳು ದೇಹವನ್ನು ತಿಂದ ಕಾರಣ ಕೊಲೆಗೀಡಾದ ವ್ಯಕ್ತಿಯನ್ನು ಗುರುತಿಸುವ ಯಾವುದೇ ಕುರುಹುಗಳು ಇಲ್ಲದಿರುವುದರಿಂದ ಪತ್ತೆಹಚ್ಚುವುದು ಕ್ಲಿಷ್ಟಕರವಾಗಿತ್ತು. ರಾಜ್ಯದ ಎಲ್ಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೂ ಎಲ್ಲೂ ನಾಪತ್ತೆ ಪ್ರಕರಣವೂ ದಾಖಲಾಗಿರಲಿಲ್ಲ. ಆದರೆ ದಕ್ಷ ಅಧಿಕಾರಿ ಪ್ರಭುಗೌಡ ಸತತ ಪ್ರಯತ್ನದಿಂದ ಮೃತವ್ಯಕ್ತಿಯ ಗುರುತನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಹುಬ್ಬಳ್ಳಿಯ ನವನಗರದ ವರದರಾಜ ಶ್ರೀನಿವಾಸ ನಾಯಕ(32) ಮೃತ ವ್ಯಕ್ತಿ ಎಂದು ಗುರುತು ಹಚ್ಚಲಾಗಿದ್ದು ತೀವ್ರತನಿಖೆಯ ನಂತರ ಮೃತ ವರದರಾಜನ ತಾಯಿಯ ತಂಗಿಯ ಮಗ ಹುಬ್ಬಳ್ಳಿಯ ಉಣಕಲ್ನ ಅಭಿಷೇಕ ಶೇಟ್ ಕೊಲೆಯ ಪ್ರಮುಖ ಆರೋಪಿ ಎಂದು ತಿಳಿದು ಬಂದಿದ್ದು ಆರೋಪಿಯನ್ನು ಬಂಧಿಸಲಾಗಿದೆ
ಇವನ ಜೊತೆಗೆ ಕೊಲೆಗೆ ಸಹಕರಿಸಿದ ಇವನ ಸ್ನೇಹಿತರಾದ ಹುಬ್ಬಳ್ಳಿಯ ಉಣಕಲ್ನ ತಾಜ್ನಗರದ ಸುರೇಶ ನೂರಪ್ಪ ಲಮಾಣಿ,ರಾಮಕುಮಾರ ಕೃಷ್ಣ ತಾಟಿಸಮ್ಲಾ ಎನ್ನುವವರನ್ನು ಬಂಧಿಸಲಾಗಿದೆ.
ಆರೋಪಿ ಅಭಿಷೇಕನು ವರದರಾಜನ ಕೊಲೆ ಮಾಡಿದರೆ ಆಸ್ತಿ ಎಲ್ಲವೂ ತನಗೆ ಸಿಗುತ್ತದೆ ಎಂದು ತಿಳಿದು ಉಳಿದ ಆರೋಪಿತರ ಸಹಾಯ ಪಡೆದು ಶಿರಸಿ ಕಡೆಗೆ ಪ್ರವಾಸಕ್ಕೆ ಹೋಗೋಣವೆಂದು ಕರೆತಂದು ಕಾತೂರು-ಉಮ್ಮಚಗಿ ರಸ್ತೆ ನಾಗನೂರಿಗೆ ಹೋಗುವ ಅರಣ್ಯದ ದಾರಿಯಲ್ಲಿ ಕಾರನ್ನು ನಿಲ್ಲಿಸಿ ಕುತಿಗೆಗೆ ಬೆಲ್ಟ್ನಿಂದ ಸುತ್ತಿ ಕೊಲೆ ಮಾಡಲಾಯಿತು ಈ ಸಮಯದಲ್ಲಿ ವರದರಾಜ್ ಒದ್ದಾಡಿದ್ದರಿಂದ ಕಾರಿನ ಕೀಲಿ ಮುರಿದು ಹೋಗಲಾಗಿ ಇನ್ನೊಬ್ಬ ಆರೋಪಿ ಬಸವರಾಜನ ಸಹಾಯದಿಂದ ಬೈಕ್ನಲ್ಲಿ ಶವವನ್ನು ಕಾಡಿನಲ್ಲಿ ಸಾಗಿಸಿ ಕಾಡಿನಲ್ಲಿ ಪ್ರಾಣಿಗಳಿಗೆಂದು ನಿರ್ಮಿಸಲಾದ ಹೊಂಡದಲ್ಲಿ ಶವವನ್ನು ಮುಚ್ಚಿದ್ದರು. ಮೃತನು ಸಂಬಂಧಿಕರ ಮನೆಗೆ ಹೋಗಿದ್ದಾನೆಂದು ಸುಳ್ಳುಸುದ್ದಿ ಹಬ್ಬಿಸಿ ಕಾಣೆಯಾದ ದೂರು ದಾಖಲಾಗದಂತೆ ನೋಡಿಕೊಂಡಿದ್ದರು.ಮೊಬೈಲ್ನ್ನು ಗೋವಾದಲ್ಲಿ ಸಮುದ್ರಕ್ಕೆ ಬಿಸಾಡಿದ್ದರು.
ಪ್ರಮುಖ ಆರೋಪಿಯ ಜೊತೆಗೆ ಎಲ್ಲಾ ಅರೋಪಿಗಳನ್ನು ಬಂಧಿಸುವಲ್ಲಿ ಮುಂಡಗೋಡು ಪೊಲೀಸ್ರು ಯಶಸ್ವಿಯಾಗಿದ್ದಾರೆ. ಪೊಲೀಸ್ ಸಿಬ್ಬಂದಿ ಶರತ ದೇವಳ್ಳಿ ಈ ಕೇಸ್ ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಪೊಲೀಸ್ ಅಧಿಕಾರಿಗಳು ವಿಶೇಷ ಬಹುಮಾನ ಘೋಷಿಸಿದ್ದಾರೆ