ಶಾರ್ವರಿ ನಾಮಸಂವತ್ಸರದ ವರ್ಷಭವಿಷ್ಯ

ಓಂ ಜಗತ್ಕಲ್ಯಾಣ ಕಾರ್ಯಾಯ ನರರೂಪಧರಾಯಚ ಯೋಗಿರಾಜಾಯ ವಂದ್ಯಾಯ ಶ್ರೀಧರಾಯನಮೋನಮಃ
##### ***** #### ***** #### ***** ####

ಮೇಷ: ಒಳಿತನ್ನೆ ಹೆಚ್ಚಾಗಿ ಕಾಣುವ ಈ ವರ್ಷ ಗುರು ಅನುಗ್ರಹದಿಂದ ಇಚ್ಚಿತ ಕೆಲಸ ಕಾರ್ಯಗಳು ನಡೆಯುತ್ತವೆ. ಆಕಸ್ಮಿಕ ಧನಲಾಭ. ಸಂಸಾರದಲ್ಲಿ ಸಾಮರಸ್ಯ ಮೂಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುವುದು.
ಸಾಹಿತ್ಯ, ಸಂಗೀತ, ನಾಟಕ, ಸಿನೇಮಾ ರಂಗದಲ್ಲಿರುವವರಿಗೆ ಉತ್ತಮ ಅವಕಾಶ ಸಿಗಲಿದೆ. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಉತ್ತಮ ವಹಿವಾಟು ನಡೆಯಲಿದೆ. ದಿನಸಿ ಹಾಗೂ ಬಟ್ಟೆ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಪಾಲುದಾರಿಕೆ ವ್ಯವಹಾರದಲ್ಲೂ ಯಶಸ್ಸು ದೊರೆಯಲಿದೆ. ಗಾರ್ಮೆಂಟ್ಸ್ ಮಾಲಿಕರಿಗೆ ಜಯ ದೊರೆಯಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಚುನಾವಣೆಯಲ್ಲಿ ಜಯ ದೊರಕಲಿದೆ. ಉನ್ನತ ಹುದ್ದೆಗಳು ನಿರಾಯಾಸವಾಗಿ ಸಿಗಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರಕಲಿದೆ. ಬಹಳ ಕಾಲದಿಂದ ನಿಂತಿರುವ ಕಡತ ವಿಲೆವಾರಿಯಾಗಲಿದೆ. ಆದರೆ ಆರೋಗ್ಯದಲ್ಲಿ ಏರುಪೇರಾಗಲಿದೆ. ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ ಬರುವ ಸಾಧ್ಯತೆ ಇದೆ. ಚರ್ಮಕ್ಕೆ ಸಂಬಂಧಿಸಿದ ಖಾಯಿಲೆ ಬರಲಿದೆ. ವಾಹನದಿಂದ ಅಪಾಯವಾಗುವ ಸಾಧ್ಯತೆ ಇರುತ್ತದೆ. ವರ್ಷದ ಕೊನೆಯಲ್ಲಿ ಕೆಲವು ಹಿನ್ನಡೆಗಳು ಆಗಲಿದೆ. ಸುಬ್ರಹ್ಮಣ್ಯ ಆರಾಧನೆ ಹಾಗೂ ಗುರು ಆರಾಧನೆ ಮಾಡುವುದು ಒಳಿತು.
######## ######## ####### ######
ವೃಷಭ : ಅಷ್ಟಮ ಶನಿ ಮುಕ್ತಾಯವಾಗಿದ್ದು ಗುರುವಿನ ವಕ್ರ ಚಲನೆಯಿಂದ ನವಮದಲ್ಲಿ ಗುರು ಸಂಚರಿಸುತ್ತಿದ್ದಾನೆ. ಇದು ತಾತ್ಕಾಲಿಕವಾಗಿದ್ದು ವರ್ಷಾರಂಭದಿಂದ ಜೂನ್ 3 ರರವರೆಗೆ ಮಾತ್ರವಾಗಿರುತ್ತದೆ. ನಂತರ ಯಥಾಪ್ರಕಾರವಾಗಿ ಗುರು ಅಷ್ಟಮದಲ್ಲೇ ಸಂಚರಿಸುವುದರಿಂದ ಕಷ್ಟಗಳ ಸರಮಾಲೆ ಎದುರಾಗಲಿದೆ.
ಪ್ರಾರಂಭದಲ್ಲಿ ಕೈಹಾಕಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಹೆಣ್ಣಿನ ಮೂಲಕ ಸಂಪತ್ತೊಂದು ಸಿಗಲಿದ್ದು ಅದನ್ನು ಉಳಿಸಿಕೊಳ್ಳುವುದು ನಿಮ್ಮ ಜಾಣ್ಮೆಗೆ ಬಿಟ್ಟಿದ್ದು. ಹೊಟೆಲ್ ಉದ್ಯಮದಾರರಿಗೆ ಉತ್ತಮ ಅವಕಾಶ ದೊರೆಯಲಿದೆ. ರೈತರಿಗೂ ಕೂಡ ಹಣ್ಣಿನ ಬೆಳೆ ಕೈಹಿಡಿಯಲಿದೆ. ಹೊಸ ಉದ್ಯೋಗ ಪ್ರಾಭಿಸುವವರಿಗೆ ವರ್ಷದ ಪ್ರಾರಂಭ ಅನಕೂಲಕರವಾಗಿರುತ್ತದೆ. ಸರಕಾರಿ ಉದ್ಯೋಗಸ್ಥರಿಗೆ ಬಡ್ತಿ ಸಿಗಲಿದೆ. ಜೂನ್ 22 ರಿಂದ ಅಗಸ್ಟ 3 ರವರೆಗೆ ಅಷ್ಟಮ ಸ್ಥಾನದಲ್ಲಿ ವಕ್ರಗುರು ಸಂಚಾರದಿಂದ ಆರ್ಥಿಕ ಹಾನಿಯ ಜೊತೆಗೆ ದೈಹಿಕ ಹಾನಿಯಾಗುವ ಸಂಭವವಿದೆ. ವಾಹನ, ಬೆಂಕಿಯಿಂದ ಅಪಾಯ ಬರಲಿದೆ. ಅಕ್ಟೊಬರ್ 4 ರಿಂದ ನವೆಂಬರ್ 15ರವರೆಗೆ ಅಷ್ಟಮಗುರು ಮುನ್ನಡೆಯಲಿದ್ದು ವ್ಯವಹಾರದಲ್ಲಿ ಹಾನಿಯಾಗಲಿದೆ. ನವೆಂಬರ್ 16 ರ ನಂತರ ನವಮ ಗುರುವಿನಿಂದಾಗಿ ಚೇತರಿಕೆಯಾಗಲಿದೆ. ಪೆಬ್ರವರಿ ತಿಂಗಳಲ್ಲಿ ಆರೋಗ್ಯ ಸಮಸ್ಯೆ ಎದುರಾಗಲಿದೆ. ಮೃತ್ಯುಂಜಯ ಆರಾಧನೆ ಮಾಡುವುದು ಒಳ್ಳೆಯದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ. ದಕ್ಷಿಣಾಮೂರ್ತಿ ಜಪವನ್ನು ಮಾಡುವುದು.
###### ###### ###### ###### ######
ಮಿಥುನ : ಅಷ್ಟಮ ಶನಿಯ ಜೊತೆಗೆ ಅಷ್ಟಮ ಗುರುವೂ ಸೇರುವುದರಿಂದ ಕೆಲಸ ಕಾರ್ಯಗಳಲ್ಲಿ ವಿಳಂಬ ಕಾಡಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದಿಲ್ಲ. ಅತಿ ಪರಿಶ್ರಮದಿಂದ ಸಾಧನೆ ಸಾಧ್ಯವಾಗದಿದ್ದರೂ ದೈಹಿಕ ತೊಂದರೆ ಎದುರಾಗಲಿದೆ. ಜೂನ್ ತಿಂಗಳಲ್ಲಿ ಬರಲಿರುವ ಖಂಡಾಗ್ರಾಸ ಸೂರ್ಯಗ್ರಹಣ ನಿಮ್ಮ ಬದುಕಿನ ಹಳಿ ತಪ್ಪುವಂತೆ ಮಾಡಲಿದೆ. ಆರ್ಥಿಕ ಸಂಕಷ್ಟ ಎದುರಾಗುವುದಲ್ಲದೆ ಆರೋಗ್ಯದಲ್ಲಿ ಏರುಪೇರಾಗಲಿದೆ. ವಾಹನ ಅಪಘಾತದ ಸಾಧ್ಯತೆ ಇದ್ದು ಅದು ಮಾರಣಾಂತಕವಾಗಿರುತ್ತದೆ.
ಜೂನ್22 ರಿಂದ ನವಂಬರ 15ರವರೆಗೆ ನಿಮಗೆ ಅದೃಷ್ಟದ ಕಾಲ. ಹೊಸ ವ್ಯವಹಾರಕ್ಕೆ ಸಕಾಲ. ವ್ಯಾಪಾರಸ್ಥರಿಗೆ ವರ್ಷದ ಮಧ್ಯಭಾಗ ಒಂದಿಷ್ಟು ಲಾಭವಾಗಲಿದೆ. ಉಳಿದಂತೆ ನಷ್ಟದ ಪ್ರಮಾಣವೇ ಹೆಚ್ಚು. ಸಿನೇಮಾ, ನಾಟಕ ಕ್ಷೇತ್ರದಲ್ಲಿರುವವರಿಗೆ ಒಂದಿಷ್ಟು ಅನುಕೂಲವಾಗಲಿದೆ. ಆದರೆ ನಿರ್ದೇಶಕರಿಗೆ, ಸಂಗೀತಗಾರರಿಗೆ ಅನುಕೂಲ ವಾತಾವರಣ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ವರ್ಷದ ಮೊದಲ ಸರದಿ ಉತ್ತಮವಾಗಿದ್ದರೂ ದ್ವಿತಿಯಾರ್ಧ ಉತ್ತಮವಾಗಿರುವುದಿಲ್ಲ. ಅಘೋರ ರುದ್ರನ ಆರಾಧನೆ ಮಾಡುವುದು ಒಳ್ಳೆಯದು
###### ###### ###### ###### ######
ಕರ್ಕಾಟಕ : ಸಪ್ತಮ ಗುರುವಿನಿಂದ ಹೊಸಮನೆ ಕಟ್ಟುವಯೋಗವಿದೆ. ಹಳೆಯ ಸಾಲ ತೀರಿಸುವಿರಲ್ಲದೆ ಹೊಸ ವ್ಯಾಪಾರ ಪ್ರಾರಂಭಿಸಲಿದ್ದೀರಿ. ಭೂಮಿ ಖರೀದಿಗೆ ಮುಂದಾದರೂ ಅದು ಕೈಗೂಡುವ ಸಾಧ್ಯತೆ ಕಡಿಮೆ. ವರ್ಷದ ಮಧ್ಯಭಾಗದಲ್ಲಿ ಅನಿರೀಕ್ಷಿತ ಸಂಕಷ್ಟಗಳ ಜೊತೆಗೆ ಪತಿ-ಪತ್ನಿಯರಲ್ಲಿ ವಿರಸ ಬರುವ ಸಾಧ್ಯತೆ ಇದೆ. ಮಕ್ಕಳ ಆರೋಗ್ಯ ಸಮಸ್ಯೆಯಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳಲಿದ್ದೀರಿ. ನಿರಂತರ ಶತ್ರುಬಾಧೆಯಿಂದ ತಾಳ್ಮೆ ಕಳೆದುಕೊಳ್ಳುವಿರಿ. ದ್ರವವಸ್ತುಗಳ ವ್ಯಾಪಾರಸ್ಥರಿಗೆ ಉತ್ತಮ ಕಾಲ. ಮಿಲ್ಟ್ರಿ, ಪೊಲೀಸ್ ಹಾಗೂ ಬೆಂಕಿಗೆ ಸಂಬಂಧಿಸಿದ ಉದ್ಯೋಗಸ್ಥರಿಗೆ ಉದ್ಯೋಗದಲ್ಲಿ ಬಡ್ತಿ ದೊರಕುವುದಲ್ಲದೆ ಮೇಲಾಧಿಕಾರಿಗಳ ಪ್ರಶಂಸೆ ದೊರಕುವುದು. ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳಿಕೆಯಾಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ. ನಟರಿಗೆ, ಸಾಹಿತಿಗಳಿಗೆ,ನಿ ರ್ದೇಶಕರಿಗೆ ಉತ್ತಮ ಅವಕಾಶ ದೊರಕಲಿದೆ. ಅಲ್ಲದೆ ಪ್ರಶಸ್ತಿಗಳು ಅರಸಿ ಬರಲಿದೆ. ವಿಷ್ಣು ಸಹಸ್ರನಾಮವನ್ನು ಪ್ರತಿ ಬುಧವಾರ ಪಠನೆ ಮಾಡುವುದರಿಂದ ಯಶಸ್ಸು ಸಾಧ್ಯವಿದೆ.
###### ###### ###### ###### ######
ಸಿಂಹ : ವೈವಾಹಿಕ ಜೀವನಕ್ಕೆ ಸಕಾಲ. ನೀವು ಬಯಸಿದಂತಹವರೆ ನಿಮ್ಮ ಸಂಗಾತಿಯಾಗಲಿದ್ದಾರೆ. ಅನೇಕ ಅಡತಡೆಗಳ ಮಧ್ಯೆಯೂ ವ್ಯವಹಾರ ಸುಗಮವಾಗಿ ನಡೆಯಲಿದೆ. ಪಂಂಚಮ ಗುರು ನಿಮ್ಮ ಇಷ್ಟಾರ್ಥವನ್ನು ಈಡೇರಿಸಲಿದ್ದಾನೆ. ಹೊಸ ವ್ಯವಹಾರ ಪ್ರಾರಂಭಿಸಲಿದ್ದೀರಿ. ಪಾಲುದಾರಿಕೆ ವ್ಯವಹಾರ ಬೇಡ. ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಬಟ್ಟೆ ವ್ಯಾಪರಸ್ಥರಿಗೆ ಅನುಕೂಲಕರ ವಾತಾವರಣ ಇರುತ್ತದೆ. ನಟರಿಗೆ, ನಿರ್ದೇಶಕರಿಗೆ ಉತ್ತಮ ಕಾಲವಾಗಿರುತ್ತದೆ. ನೌಕರವರ್ಗದಲ್ಲಿ ಮೇಲಾಧಿಕಾರಿಗಳ ಅಸಹಕಾರದ ಮಧ್ಯೆಯೂ
ಉತ್ತಮ ಸಾಧನೆ ಮಾಡಲಿದ್ದೀರಿ. ಇದರಿಂದ ಬಡ್ತಿ ದೊರಕುವುದರ ಜೊತೆಗೆ ಉತ್ತಮ ಭವಿಷ್ಯ ರೂಪುಗೊಳ್ಳಲಿದೆ.
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದ್ದು, ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಲಿದೆ. ಉನ್ನತ ವ್ಯಾಸಂಗ ಮಾಡುವವರು ಯಶಸ್ಸು ಸಾಧಿಸುವ ಸಾಧ್ಯತೆ ಇದೆ. ಸುಬ್ರಹ್ಮಣ್ಯ ಕವಚ ಪಠನೆ ಒಳ್ಳೆಯದು.
###### ###### ###### ###### ######
ಕನ್ಯಾ : ಈ ವರ್ಷ ಆತುರದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಪ್ರಾರಂಭದಲ್ಲಿ ಗುರುವಿನ ವಕ್ರಚಲನೆಯಿಂಂದ ಅನುಕೂಲಕರವಾಗಿ ಕಂಡುಬಂದರೂ ಇದು ಮುಂದುವರಿಯುವುದಿಲ್ಲ. ಹೊಟೆಲ್ ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ಸೌಂದರ್ಯವರ್ಧಕ ವ್ಯಾಪಾರಸ್ಥರಿಗೂ ಭವಿಷ್ಯವಿದೆ. ನಟರಿಗೆ, ಸಂಗೀತಗಾರರಿಗೆ, ಸಾಹಿತಿಗಳಿಗೆ ಉತ್ತಮ ಫಲ ಸಿಗಲಿದೆ‌. ವರ್ಷದ ಮಧ್ಯಭಾಗದಿಂದ ಸಮಸ್ಯೆ ಪ್ರಾರಂಭವಾಗಲಿದೆ. ಸ್ನೇಹಿತರಲ್ಲಿ, ನೆರೆ-ಹೊರೆಯವರಲ್ಲಿ ಮನಸ್ತಾಪವಾಗಲಿದೆ. ಉದರ ಶೂಲೆ, ಮೂಲವ್ಯಾಧಿಯಂತಹ ಸಮಸ್ಯೆ ನಿರಂತರವಾಗಿ ಕಾಡಲಿದೆ. ಬಾಳಸಂಗಾತಿಯೊಂದಿಗೆ ಭಿನ್ನಾಭಿಪ್ರಾಯದಿಂದಾಗಿ ಮನಃಶಾಂತಿ ಕದಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ. ಆದರೆ ನಿರಂತರ ಪರಿಶ್ರಮದ ಅವಶ್ಯಕತೆ ಇದೆ. ಮುಂದಿನ ಫೆಬ್ರವರಿಯ ನಂತರ ಹೊಸ ವಾಹನ ಖರೀದಿಯ ಯೋಗ ಬರಲಿದೆ. ಪಿತ್ರಾರ್ಜಿತ ಆಸ್ತಿಯೊಂದು ಅನಿರೀಕ್ಷಿತವಾಗಿ ದೊರಕಲಿದೆ. ವಿದ್ಯಾರ್ಥಿಗಳು ಸರಸ್ವತಿ ಪೂಜೆಯನ್ನು ಮಾಡುವುದು ಒಳ್ಳೆಯದು. ವ್ಯಾಪಾರಸ್ಥರು ಲಕ್ಷ್ಮೀಯಂತ್ರವನ್ನು ಪೂಜೆ ಮಾಡಬೇಕು.
###### ###### ###### ###### ######


ತುಲಾ : ಕಾಲಕ್ಕೆ ತಕ್ಕಂತೆ ನೀವು ಬದಲಾಗಬೇಕು. ಇಲ್ಲದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಉದ್ಯೋಗಸ್ಥರಿಗೆ ಶಿಕ್ಷೆಯ ರೂಪದಲ್ಲಿ ವರ್ಗಾವಣೆಯಾಗಲಿದೆ. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ನಷ್ಟ ಸಂಭವಿಸಲಿದೆ. ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯದಿಂದ ದ್ವೇಷಸಾಧನೆ ಸಾಧ್ಯತೆ ಇದೆ. ಭೂವಿವಾದದಿಂದ ಧನನಾಶವಾಗಲಿದೆ. ಯಾವುದೇ ಹೊಸ ವ್ಯವಹಾರ ಪ್ರಾರಂಭಿಸಲು ಇದು ಸೂಕ್ತಕಾಲವಲ್ಲ. ಯಾರೇ ಹೇಳಿದರೂ ಬ್ಯಾಂಕ್ ವ್ಯವಹಾರದಲ್ಲಿ ಜಾಮೀನುದಾರರಾಗಬೇಡಿ. ಸಿನೇಮಾ ರಂಗದಲ್ಲಿರುವವರಿಗೆ ಯಶಸ್ಸು ಮರಿಚಿಕೆಯಾಗಲಿದೆ. ನವಂಬರ ಹಾಗೂ ಡಿಸಂಬರ್ ತಿಂಗಳಲ್ಲಿ ಆರೋಗ್ಯ ಹದಗೆಡಲಿದೆ. ಹೃದಯಸಂಬಂಧಿ ಖಾಯಿಲೆ ನಿಮ್ಮನ್ನು ಹಣಿಯಲಿದೆ. ಫೆಬ್ರವರಿಯಿಂದ ಪರಿಸ್ಥಿತಿ ಸುಧಾರಣೆಯಾಗಲಿದೆ. ಆರೋಗ್ಯ ಸುಧಾರಣೆಯಾಗುವುದರ ಜೊತೆಗೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ. ಗುರು ಆರಾಧನೆ ಮಾಡುವುದರಿಂದ ಎಲ್ಲವೂ ಒಳಿತಾಗಲಿದೆ.
###### ###### ###### ###### ######
ವೃಶ್ಚಿಕ: ಎಲ್ಲಾ ಕಷ್ಟ ಮುಗಿದು ಬದುಕು ಒಂದು ಹಂತಕ್ಕೆ ಬಂದಿತೆನ್ನುವಾಗ ಕಾಳಸರ್ಪದೋಷ ವಕ್ರಿಸಿದೆ. ಹಣಕಾಸಿನ ಸಮಸ್ಯೆ ಬರದಿದ್ದರೂ ಸಾಂಸಾರಿಕ ಜೀವನದಲ್ಲಿ ಅಲ್ಲೋಲಕಲ್ಲೋಲವಾಗಲಿದೆ. ಬಾಳಸಂಗಾತಿಯ ಆರೋಗ್ಯ ಹದಗೆಡಲಿದೆ. ವಾಹನ, ಬೆಂಕಿ, ನೀರಿನಿಂದ ಅಪಘಾತವಾಗಲಿದೆ. ಎಚ್ಚರಿಕೆ ಅವಶ್ಯಕ. ನವಂಬರ ನಂತರ ಅನಿರೀಕ್ಷಿತ ಧನಾಗಮನವಾಗಲಿದೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿದೆ. ಭೂವಿವಾದದಲ್ಲಿ ಜಯದೊರಕಲಿದೆ. ಬಂಗಾರ ಖರೀದಿ ಮಾಡಲಿದ್ದೀರಿ. ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಹೊಸವ್ಯಾಪಾರ ಪ್ರಾರಂಭಿಸಲು ತೊಂದರೆ ಇಲ್ಲ. ಸುಗಂಧ ದ್ರವ್ಯ ವ್ಯಾಪಾರದಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ. ನಟರಿಗೆ ಯಶಸ್ಸು ಸಿಗಲಿದೆ. ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹಿನ್ನಡೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು ಸಿಗುವುದರಿಂದ ಪರಿಶ್ರಮ ಪಡಬೇಕು. ಸುಬ್ರಹ್ಮಣ್ಯ ಹಾಗೂ ನಾಗದೇವತೆ ಆರಾಧನೆ ಮಾಡುವುದು ಒಳ್ಳೆಯದು.
###### ###### ##### ##### #####
ಧನಸ್ಸು : ವರ್ಷಾರಂಭದ ದ್ವಿತೀಯ ಗುರುವಿನಿಂದ ಹಣಕಾಸಿನ ವ್ಯವಹಾರದಲ್ಲಿ ಜಯದೊರಕಲಿದೆ. ಆದರೆ ಸಾಡೇಸಾತ್ ಶನಿಯಿಂದ ನಿರೀಕ್ಷಿತ ಫಲ ದೊರೆಯುವುದಿಲ್ಲ. ಕ್ರಯ-ವಿಕ್ರಯದಲ್ಲಿ ಎಚ್ಚರ ಅವಶ್ಯಕವಿದೆ. ಸ್ನೇಹಿತರಿಂದ ವ್ಯವಹಾರದಲ್ಲಿ ಮೋಸ ಹೋಗಲಿದ್ದೀರಿ. ಹೆಚ್ಚಿನ ಬಂಡವಾಳ ಹೂಡಿ ವ್ಯವಹಾರ ಪ್ರಾರಂಭಿಸಬೇಡಿ. ಧಾನ್ಯ ವ್ಯಾಪಾರಿಗಳಿಗೆ ಒಳ್ಳೆಯ ಭವಿಷ್ಯವಿದೆ. ಜ್ಯುವೆಲರಿ ವ್ಯಾಪಾರಸ್ಥರಿಗೆ ಅನಿರೀಕ್ಷಿತ ದೊಡ್ಡಮಟ್ಟದ ವ್ಯಾಪಾರ ದೊರಕಲಿದೆ. ಸಿನೇಮಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಯಶಸ್ಸು ದೊರಕಲಿದೆ. ಸಾಹಿತಿಗಳಿಗೆ ಹೊಸ ಕೃತಿ ಬರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಪರಿಶ್ರಮದಿಂದ ಉತ್ತಮ ಜಯದೊರಕಲಿದೆ. ನವಗ್ರಹ ಪೂರ್ವಕ ಶ್ರೀಶನೇಶ್ಚರ ಪೂಜೆ ಮಾಡುವುದು.
##### ##### ##### ##### ##### #####
ಮಕರ : ಜನ್ಮಸ್ಥಸಾಡೇಸಾತ ಶನಿಯಿಂದಾಗಿ ಮನೋಕ್ಲೇಶಗಳು ಹೆಚ್ಚಾಗಲಿದೆ. ವರ್ಷದಾರಂಭದಲ್ಲಿ ಜನ್ಮಸ್ಥಾನದಲ್ಲಿ ಸಂಚರಿಸುವ ಗುರುವಿನಿಂದಾಗಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಹಣಕಾಸಿನ ತೊಂದರೆಯಿಂದ ವ್ಯವಹಾರದಲ್ಲಿ ಏರುಪೇರು. ಸ್ವಜನರಿಂದ ಬೆನ್ನಲ್ಲಿ ಚೂರಿ ಹಾಕುವ ಕೆಲಸವಾಗಲಿದೆ. ಸ್ತ್ರೀ ಯಿಂದ ಅಪಮಾನ ಸಂಭವವಿರುವುದರಿಂದ ಸಲುಗೆ ಬೇಡ. ಕೋಪ-ತಾಪವನ್ನು ಬಿಟ್ಟು ಸಂಯಮದಿಂದ ವರ್ತಿಸಿದರೆ ಒಂದಿಷ್ಟು ಒಳ್ಳೆಯ ಫಲ ದೊರಕಲಿದೆ. ಹೊಟೆಲ್ ಉದ್ಯಮಿಗಳಿಗೆ ಜಯ ದೊರಕಲಿದೆ. ಉಳಿದಂತೆ ದವಸ-ಧಾನ್ಯ ಮಾರಾಟಗಾರರಿಗೆ ಒಂದಿಷ್ಟು ಒಳ್ಳೆಯ ಫಲ ಸಿಗಲಿದೆ. ಯಾವುದೇ ಹೊಸ ವ್ಯವಹಾರಗಳಿಗೆ ಕೈಹಾಕಬೇಡಿ. ನಟರಿಗೆ, ಸಂಗೀತಗಾರರಿಗೆ ಮಧ್ಯಮಫಲ ದೊರಕಲಿದೆ. ಸಾಹಿತಿಗಳಿಗೆ ಅಪಮಾನವಾಗುವ ಸಂಭವವಿದೆ‌. ವಿದ್ಯಾರ್ಥಿಗಳಿಗೆ ಪ್ರಾರಂಭದಲ್ಲಿ ಹಿನ್ನಡೆಯಾದರೂ ವರ್ಷಾಂತ್ಯದಲ್ಲಿ ಉತ್ತಮ ಫಲ ದೊರಕಲಿದೆ. ಮೃತ್ಯುಂಜಯ ರುದ್ರಾರಾಧನೆ ಹಾಗೂ ನರಸಿಂಹ ಪೂಜೆ ಮಾಡುವುದು ಉತ್ತಮ.
##### ##### ##### ##### ##### #####
ಕುಂಭ : ಸಾಡೇಸಾತ್ ಶನಿಯ ಪ್ರಾರಂಭದೊಂದಿಗೆ ವರ್ಷದ ಆರಂಭದಲ್ಲಿ ದ್ವಾದಶ ಸ್ಥಾನದಲ್ಲಿ ಸಂಚರಿಸುವ ಗುರುವಿನಿಂದಾಗಿ ಮಾನಸಿಕ ಕ್ಲೇಶ ಅನುಭವಿಸುವಿರಿ‌. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯದಿಂದ ಉದ್ಯೋಗದಲ್ಲಿ ಕಿರಿಕಿರಿ ಅನುಭವಿಸುವಿರಿ.
ಹೊಟ್ಟೆ ನೋವು ನಿಮ್ಮನ್ನು ಎಡಬಿಡದೆ ಕಾಡಿಸಲಿದೆ. ಜುಲೈ ನಿಂದ ನವಂಬರವರೆಗೆ ಉತ್ತಮ ಕಾಲವಿದ್ದು ಎಲ್ಲಾ ಕೆಲಸದಲ್ಲೂ ಜಯ ದೊರಕಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗುವುದಲ್ಲದೆ ಹೊಸ ಉದ್ಯೋಗ ಪ್ರಾರಂಭಿಸಲಿದ್ದೀರಿ. ಕಬ್ಬಿಣ ಹಾಗೂ ಜ್ಯುವೆಲರಿ ವ್ಯಾಪಾರಸ್ಥರಿಗೆ ಉತ್ತಮ ಅವಕಾಶವಿದೆ. ಸಿನೇಮಾ ಕ್ಷೇತ್ರದಲ್ಲಿರುವವರಿಗೆ ಅವಕಾಶ ಕಡಿಮೆಯಾಗಲಿದೆ. ಸಿಗುವ ಅವಕಾಶವೂ ಕೈತಪ್ಪಲಿದೆ. ಸಾಹಿತಿಗಳಿಗೆ ಉತ್ತಮ ಭವಿಷ್ಯವಿದ್ದು ಹೊಸಕೃತಿ ಬರಲಿದೆ. ವಿದ್ಯಾರ್ಥಿಗಳಿಗೆ ವರ್ಷಾರಂಭ ಮತ್ತು ವರ್ಷಾಂತ್ಯಗಳು ಉತ್ತಮವಾಗಿರುವುದಿಲ್ಲ. ಮಧ್ಯದಲ್ಲಿ ಉತ್ತಮ ಅವಕಾಶವಿದ್ದು ನಿರಂತರ ಪರಿಶ್ರಮದ ಅವಶ್ಯಕತೆ ಇದೆ. ದಶರಥಕೃತ ಶನೇಶ್ಚರ ಸ್ತೋತ್ರ ಪಠಿಸುವುದು.
##### ##### ##### ##### ##### #####
ಮೀನ : ಏಕಾದಶ ಗುರುವಿನಿಂದಾಗಿ ವಷಾರಂಭವು ಉತ್ತಮವಾಗಿರುವುದು. ಹೊಸ ಕೆಲಸ ಪ್ರಾರಂಭಿಸಲು ಸಕಾಲ. ಒಲಿದು ಬರುವ ಸಂಗಾತಿಯಿಂದ ಧನಾಗಮನ. ಚಿನ್ನ ಖರೀದಿಯ ಜೊತೆಗೆ ಹೊಸಮನೆ ಕಟ್ಟುವ ಕೆಲಸವನ್ನೂ ಪ್ರಾರಂಭಿಸಲಿದ್ದೀರಿ. ಭೂಖರೀದಿಗೆ ಮುಂದಾಗ ಬೇಡಿ. ಸದ್ಯ ಅನಕೂಲ ಎನಿಸಿದರೂ ಮುಂದೆ ಸಮಸ್ಯೆ ಆಗಲಿದೆ. ಹೊಟೆಲ್ ಉದ್ಯಮಿಗಳಿಗೆ ಬಟ್ಟೆ ಉದ್ಯಮಿಗಳಿಗೆ ಅಪಾರ ಲಾಭವಾಗಲಿದೆ‌. ನವಂಬರ ನಂತರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ. ವಿಲಾಸಿ ಜೀವನದಿಂದ ಜನನೇಂದ್ರಿಯಕ್ಕೆ ಸಂಭಂಧಿಸಿದ ರೋಗ ಕಾಣಿಸಿಕೊಳ್ಳಲಿದೆ. ಮನೋನಿಗ್ರಹ ಅವಶ್ಯಕ. ಸಿನೇಮಾ ಕ್ಷೇತ್ರದಲ್ಲಿರುವವರಿಗೆ ಅಪಾರ ಅವಕಾಶ ಸಿಗಲಿದೆ. ನಟರಿಗೆ, ಸಂಗೀತಗಾರರಿಗೆ, ಸಾಹಿತಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಪ್ರಸಿದ್ದಿಯ ಜೊತೆಗೆ ಹಣಕಾಸು ದೊರೆಯಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ನಿರಾಯಾಸ ಜಯದೊರಕಲಿದೆ. ಉನ್ನತ ವ್ಯಾಸಂಗ ಮಾಡುವವರು ಯಶಸ್ಸು ಪಡೆಯಲಿದ್ದೀರಿ.
##### ##### ##### ##### ##### #####
ಶುಭಂ


ಶ್ರೀಗುರುವಿನ ಅನುಗ್ರಹದಿಂದ ನವಗ್ರಹಗಳು ಎಲ್ಲರನ್ನೂ ಕಾಪಾಡಲಿ. ಮೃತ್ಯುಂಜಯ ತ್ರ್ಯಂಬಕ ರುದ್ರ ದೇವ ತನ್ನೆಲ್ಲ ರೋಗಗಣಗಳಿಂದ ಜಗತ್ತನ್ನು ರಕ್ಷಿಸಲಿ. ಶ್ರೀಮನ್ನಾರಾಯಣ ಜಗತ್ತು ಶಾಂತಿ, ಸುಭಿಕ್ಷೆಯಿಂದ ಇರುವಂತೆ ಅನುಗ್ರಹಿಸಲಿ.
ಲೋಕಾ ಸಮಸ್ತಾ ಸುಖಿನೋ ಭವಂತು

About the author

Adyot

Leave a Comment