ಆದ್ಯೊತ್ ಸುದ್ದಿನಿಧಿ:
ಶ್ರೀಶಾರದಾ ಸಂಗೀತ ಸಾಂಸ್ಕೃತಿಕ ಕಲಾ ಸಂಘ(ರಿ) ಗದಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮ ಸಭಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಗದಗನಗರದ ವಿವೇಕಾನಂದ ಬಡಾವಣೆಯ ಮೂರನೇ ಮುಖ್ಯ ರಸ್ತೆಯಲ್ಲಿರುವ ಹರ್ಷ ಬಿಲ್ಡಿಂಗ್ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದಾ ಸಂಗೀತ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಎಂ.ಟಿ.ಹರಗದ ವಹಿಸಿದ್ದರು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ನೆರವೇರಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ.ಎಸ್.ಎಸ್. ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಟಿ.ಎನ್.ಗೋಡಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಕಷ್ಟಪಟ್ಟು ಯುವ ಕಲಾವಿದರನ್ನು ವೇದಿಕೆ ಮೂಲಕ ನಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯ. ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ .ಸತತ ಪರಿಶ್ರಮದ ಅಭ್ಯಾಸದ ಮೂಲಕ ಮಾತ್ರ ಸಂಗೀತ ಸಿದ್ಧಿಯನ್ನು ಪಡೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಹರಗದ ಮಾತನಾಡಿ, ಇಂದಿನ ಕಾಲದಲ್ಲಿ ಯುವ ಜನಾಂಗ ಸುಗಮ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕಡಿಮೆ ಆಸಕ್ತಿ ಹೊಂದಿದೆ. ಸಾಹಿತ್ಯ ಸಂಗೀತ ಕಲೆಯ ನಾಡು ಗದಗ ಎಂಬುದು ಹೆಮ್ಮೆಯ ಸಂಗತಿ. ಸಂಗೀತಕ್ಕೆ ಎಲ್ಲ ಕಾಲದಲ್ಲೂ ಗೌರವ ಇದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಭುವನೇಶ್ವರಿ ಹಿರೇಮಠ, ಸುರೇಖಾ ವ್ಹಿ ಜಕ್ಕಲಿ, ವಿಜಯಲಕ್ಷ್ಮಿ ಟಿ ಗೋಡಿ, ವಿಜಯಲಕ್ಷ್ಮಿ ಎಸ್ ಬೆಂತೂರ ಸುಗಮ ಸಂಗೀತ ಅಮೋಘವಾಗಿತ್ತು ಇವರಿಗೆ ತಬಲಾ ಸಾಥ್ ಮುದ್ಲಾಪೂರ ನೀಡಿದರು. ಅನ್ವಿತಾ ವಿಶ್ವನಾಥ ತೆಗ್ಗಿ, ವೇದಾ ಉ ಜಕ್ಕಲಿ, ಋತ್ವಿಕಾ ವ್ಹಿ ಸಜ್ಜನ, ಕಾರ್ತಿಕ ಪಿ ಜಕ್ಕಲಿ, ಹರ್ಷಿಣಿ ಪಿ ಜಕ್ಕಲಿ, ವಿಶ್ವನಾಥ ವ್ಹಿ ಜಕ್ಕಲಿ, ಯಶವಂತ ವ್ಹಿ ಜಕ್ಕಲಿ, ಸಿಂಚನಾ ಎಸ್ ಸಜ್ಜನ ಅವರ ಭರತನಾಟ್ಯ ಪ್ರೇಕ್ಷಕರ ಗಮನ ಸೆಳೆದವು.

ಭುವನೇಶ್ವರಿ ಹಿರೇಮಠ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷೆ ರಾಜೇಶ್ವರಿ ಸಜ್ಜನರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಸಂಗಮೇಶ ಸಜ್ಜನರ ಸ್ವಾಗತಿಸಿದರೆ ಪ್ರೊ. ಎಚ್.ಎನ್.ಕಾಳೆ ನಿರೂಪಿಸಿದರು.
