ಹರಿದಾಸ ಸಾಹಿತ್ಯ ಪ್ರವೀಣ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ

ಆದ್ಯೋತ್ ನ್ಯೂಸ್ ಡೆಸ್ಕ್ : ದಾಸ ಸಾಹಿತ್ಯದಲ್ಲಿ ವಿಶಿಷ್ಟ, ವಿಸ್ಮಯ ಕಾರ್ಯ ನೀಡುತ್ತಿರುವವರು ಡಾ.ಅರಳುಮಲ್ಲಿಗೆ ಪಾರ್ಥಸಾರಥಿ. ಇವರು ಐವತ್ತೆರಡು ಗ್ರಂಥಗಳನ್ನು, ಮೂವತ್ತಕ್ಕೂ ಹೆಚ್ಚು ಧ್ವನಿ ಮುದ್ರಿಕೆಗಳನ್ನು ಜಗತ್ತಿಗೆ ನೀಡಿದವರು. ಹರಿದಾಸ ಸಾಹಿತ್ಯದ ಮೂಲಕ ಆಧ್ಯಾತ್ಮ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ? ಎನ್ನುವ ಬಗ್ಗೆ ವಿಶ್ವಕ್ಕೆ ತಿಳಿಸಿದವರು.

ದೊಡ್ಡಬಳ್ಳಾಪುರದ ಅರಳುಮಲ್ಲಿಗೆ ಎಂಬ ಗ್ರಾಮದಲ್ಲಿ 1948ರಲ್ಲಿ ಕೃಷ್ಣಮೂರ್ತಿ-ಗಂಗಮ್ಮ ದಂಪತಿಗಳ ಪುತ್ರನಾಗಿ ಪಾರ್ಥಸಾರಥಿಯವರು ಜನಿಸುತ್ತಾರೆ. ಪ್ರಾಥಮಿಕ ಶಿಕ್ಷಣ ಅರಳುಮಲ್ಲಿಗೆಯಲ್ಲಾದರೆ, ಪ್ರೌಢಶಿಕ್ಷಣವನ್ನ ದೊಡ್ಡಬಳ್ಳಾಪುರದಲ್ಲಿ ಮುಗಿಸಿದ್ದಾರೆ. ಬೆಂಗಳೂರಿನಲ್ಲಿ ಬಿ.ಕಾಂ ಹಾಗೂ ಎಂ.ಕಾಂ ಶಿಕ್ಷಣವನ್ನು ಪಡೆದ ಇವರು ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನಲ್ಲಿ 28 ವರ್ಷಗಳ ಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ನಂತರ ಸ್ವಯಂ ನಿವೃತ್ತಿ ಪಡೆದು ಹರಿದಾಸ ಸಾಹಿತ್ಯ ಹಾಗೂ ವಿಷ್ಣು ಸಹಸ್ರನಾಮ ಪ್ರಚಾರದಲ್ಲಿ ತೊಡಗಿಸಿಕೊಂದಿದ್ದಾರೆ.

ವಿಷ್ಣು ಸಹಸ್ರನಾಮದ ಬಗ್ಗೆ ವಿಶೇಷ ಒಲವು ಪಡೆದಿರುವ ಪಾರ್ಥಸಾರಥಿಯವರು ವಿಷ್ಣುಸಹಸ್ರನಾಮವನ್ನು ವಿಶ್ವದಾದ್ಯಂತ ಪ್ರಚುರ ಪಡಿಸಲು Global vishnu sahasranama sathsang federaion ಎನ್ನುವ ಅಂತರಾಷ್ಟ್ರೀಯ ಮಹತ್ವದ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
ಇವರ “ಹರಿದಾಸರ ಹತ್ತುಸಾವಿರ ಹಾಡುಗಳು” ಗ್ರಂಥವು ಸಾಹಿತ್ಯ ಹಾಗೂ ಸಂಗೀತ ವಲಯದಲ್ಲಿ ಶತಮಾನದ ಗ್ರಂಥ ಎಂದೇ ಪರಿಗಣಿತವಾಗಿದೆ.

ಹರಿದಾಸ ಸಾಹಿತ್ಯ ಸಾಗರ, ಮಾನವ ಜನ್ಮ ದೊಡ್ಡದು, ಈಸಬೇಕು ಇದ್ದು ಜೈಸಬೇಕು, ಎಂಬ ಮೂರು ಬೃಹತ್ ಅಭಿನಂದನ ಗ್ರಂಥಗಳನ್ನು ನಾಡಿನ ಜನತೆ ಅರಳುಮಲ್ಲಿಗೆಯವರಿಗೆ ನೀಡಿ ಗೌರವಿಸಿದ್ದಾರೆ. 2014 ರಲ್ಲಿ ಶ್ರೀಲಂಕಾ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯವು ಪಾರ್ಥಸಾರಥಿ ದಂಪತಿಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಮೇರಿಕಾದಲ್ಲಿ ಭಾರತದ ಬಗ್ಗೆ ಪ್ರಕಟವಾಗಿರುವ “Hindu Religious Figures/ Indain nonfiction Writers/ Indian Historians/ Vaishnavisam/ Dwaitha ಮುಂತಾದ ಇಂಗ್ಲೀಷ ಗ್ರಂಥಗಳ ಒಂದು ಈಡೀ ಅಧ್ಯಾಯದಲ್ಲಿ ಅರಳು ಮಲ್ಲಿಗೆಯವರ ಅಂತರಾಷ್ಟ್ರೀಯ ಆಧ್ಯಾತ್ಮಿಕ-ಸಾಹಿತ್ಯಕ-ಸಾಂಸ್ಕ್ರತಿಕ ಸಾಧನೆಗಳ ಬಗ್ಗೆ ವಿವರಿಸಿ ಗೌರವಿಸಿದೆ.

ಮಾರ್ಚ್ 4 ರಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ನೇತೃತ್ವದಲ್ಲಿ ಸರ್ವಸಮಾಜವನ್ನು ಒಳಗೊಂಡು “ಕೃಷ್ಣಾರ್ಪಣಮ್” ಎಂಬ ಕಾರ್ಯಕ್ರಮ ನಡೆಯಲಿದೆ. ಐದುಸಹಸ್ರ ಜನರು ಸಾಮೂಹಿಕವಾಗಿ ವಿಷ್ಣುಸಹಸ್ರನಾಮವನ್ನು ಪಠಿಸಲಿದ್ದಾರೆ. ಇದರ ಅಂಗವಾಗಿ ಗೋಪಾಲಕೃಷ್ಣ ಹೋಮ, ನಾರಾಯಣ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕೃಷ್ಣಾರ್ಪಣಮ್ ಕಾರ್ಯಕ್ರಮದ ಬಗ್ಗೆ ತಿಳಿಸಲು, ವಿಷ್ಣು ಸಹಸ್ರನಾಮದ ಮಹತ್ವ ಸಾರಲು ಡಾ.ಪಾರ್ಥಸಾರಥಿಯವರು ರಾಜ್ಯದ ಉದ್ದಗಲದಲ್ಲಿ ಸಂಚಾರ ಮಾಡಿ ಪ್ರವಚನವನ್ನು ನೀಡುತ್ತಿದ್ದಾರೆ.

About the author

Adyot

Leave a Comment