ಬೇಡಿಕೆ ಈಡೇರಿಸಲು ಆಗ್ರಹಿಸಿ ಡಿ ಎಸ್ ಎಸ್ ಪ್ರತಿಭಟನೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆಯ ನೇತೃತ್ವದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸಿದ್ದಾಪುರಪಟ್ಟಣದಲ್ಲಿನ ಸನಂ.೧೧೧ಅ\೨ನ ೨೦ಗುಂಟೆ ಸರ್ಕಾರಿ ಪಡಜಾಗವನ್ನು ಸ್ವೀಪರ್ ಕ್ವಾಟರ‍್ಸಗೆ ಮೀಸಲಿಟ್ಟಿದ್ದು ಈಗ ಅಲ್ಲಿದ್ದ ಎಲ್ಲ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.ಪಟ್ಟಣದಲ್ಲಿ ಡಾ|ಬಿ.ಆರ್.ಅಂಬೇಡ್ಕರ್ ಭವನವನ್ನು ನಿರ್ಮಿಸಲು ಈ ಜಾಗ ಸೂಕ್ತಸ್ಥಳವಾಗಿದ್ದು ಈಗಾಗಲೇ ಸಹಾಯಕ ಕಮೀಷನರ್ ಅವರ ಮಂಜೂರಿಗೆ ಕಳುಹಿಸಲಾಗಿದೆ.ಆ ಸ್ಥಳವನ್ನು ಡಾ|ಅಂಬೇಡ್ಕರ್ ಭವನ ನರ‍್ಮಾಣಕ್ಕೆ ಮಂಜೂರು ಮಾಡಬೇಕು.ಪಟ್ಟಣದ ಮಿನಿ ವಿಧಾನಸೌಧದ ಎದುರು ಇರುವ ಡಾ| ಅಂಬೇಡ್ಕರ್ ವೃತ್ತ ರಸ್ತೆ ಅಗಲೀಕರಣದ ಕಾರಣ ಒಡೆದುಹಾಕಿದ್ದು ಅದನ್ನು ಮರುಸ್ಥಾಪನೆ ಮಾಡಿ ಅಂಬೇಡ್ಕರ್ ಪುತ್ಥಳಿಯನ್ನು ನಿರ‍್ಮಾಣ ಮಾಡಬೇಕು.

ತಾಲೂಕಿನ ಬಳ್ಳಟ್ಟೆ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ಮತ್ತು ಮಟ್ಕಾ ಜೂಜು ಹೆಚ್ಚಾಗಿದ್ದು ಇದರಿಂದ ಪ.ಜಾ ಮತ್ತು ಪ.ಪಂಗಡದ ಮಕ್ಕಳು ಆ ವ್ಯಸನಕ್ಕೆ ಸಿಲುಕಿ ವಿದ್ಯಾಭ್ಯಾಸ ನಿಲ್ಲಿಸುತ್ತಿದ್ದು ಅದನ್ನು ನಿಯಂತ್ರಿಸಬೇಕು.ಅಲ್ಲದೇ ತಾಲೂಕಿನ ಹಲವೆಡೆ ಪರಿಶಿಷ್ಠ ಜಾತಿ,ಪಂಗಡದ ವಿದ್ಯಾರ್ಥಿಗಳು ಶಾಲೆಯನ್ನು ಅರ್ಧಕ್ಕೆ ಬಿಡುತ್ತಿದ್ದು ಅದಕ್ಕೆ ಸೂಕ್ತ ಪರಿಹಾರ ಕಂಡು ಆ ಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು.ತಾಲೂಕಿನ ಹಲವೆಡೆ ಪರಿಶಿಷ್ಠರು ಸಾಗುವಳಿ ಮಾಡುವ ಜಮೀನುಗಳು ಹಂಗಾಮಿ ಲಾಗಣಿಯಲ್ಲಿ ಇದ್ದು ತಮ್ಮ ಹೆಸರು ಲಗತ್ತಿದ್ದರೂ ಕೂಡ ಅರಣ್ಯ ಇಲಾಖೆಯವರು ದಬ್ಬಾಳಿಕೆ ಮಾಡುತ್ತಿದ್ದಾರೆ.(ಉದಾ: ಬೇಡ್ಕಣಿ ಗ್ರಾಮದ ಸ,ನಂ.೩೭).ಇಂಥ ಸಾಗುವಳಿ ಜಮೀನನ್ನು ಪರಿಶಿಷ್ಠರಿಗೆ ಮಂಜೂರು ಮಾಡಬೇಕು.ಹಲಗೇರಿ ಗ್ರಾಪಂನ ಕುಳಿಬೀಡು ಗ್ರಾಮದ ಸ.ನಂ.೮೭ರಲ್ಲಿ ಸರಕಾರಿ ಪಡ ಗೋಮಾಳವಿದ್ದು ಅದರಲ್ಲಿ ೧ ಎಕರೆ ಪರಿಶಿಷ್ಠರ ಸ್ಮಶಾನಕ್ಕೆ ಮೀಸಲಿಡಬೇಕು.ಕಾನಗೋಡಿನ ಸ.ನಂ ೨೬೧ರಲ್ಲಿ ಚಮಗಾರ ಜಾತಿಯವರಿಗೆ ಇದ್ದ ಸ್ಮಶಾನ ಜಾಗ ಒತ್ತುವರಿಯಾಗಿದ್ದು ಅದನ್ನು ಖುಲ್ಲಾ ಪಡಿಸಬೇಕು.

ಯಶಸ್ವಿನಿ ಯೋಜನೆಯಲ್ಲಿ ಜಮೀನು ಪಹಣಿಪತ್ರಿಕೆ ಹೊಂದಿದವರಿಗೆ ಮಾತ್ರ ಸೌಲಭ್ಯದ ಅವಕಾಶವಿದ್ದು ಪಹಣಿ ಇಲ್ಲದ ಪರಿಶಿಷ್ಠರಿಗೆ ಅದರಲ್ಲಿ ಅವಕಾಶ ಒದಗಿಸಬೇಕು.ಪಟ್ಟಣದಲ್ಲಿ ವಾಸವಿರುವ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಬೋವಿವಡ್ಡರ ಸಮಾಜದವರಿಗೆ ವಸತಿಯೋಜನೆಯಲ್ಲಿ ಸೌಲಭ್ಯ ಒದಗಿಸಬೇಕು.
ಪಟ್ಟಣದ ಬೋವಿವಡ್ಡರ ಹಾಗೂ ಚಮಗಾರ ಸಮಾಜದವರು ತಮ್ಮ ಕುಲಕಸುಬನ್ನು ನಡೆಸಲು ಈಗಿರುವ ಸ್ಥಳದಲ್ಲೇ ಅವಕಾಶ ಕಲ್ಪಿಸಬೇಕು ಎಂದು ದ.ಸಂ.ಸ.ನ ಜಿಲ್ಲಾ ಸಂಘಟಕ ಸಂಚಾಲಕ ಎಚ್.ಕೆ.ಶಿವಾನಂದ,ಶಿವರಾಂ ಬಳ್ಳಟ್ಟೆ, ತಾಲೂಕ ಸಂಚಾಲಕ ಅಣ್ಣಪ್ಪ ಹಸ್ಲರ್, ಪದಾಧಿಕಾರಿಗಳಾದ ಲಕ್ಷ್ಮಣ ಬೋರ‍್ಕರ್,ಲೋಕೇಶ ಚನ್ನಯ್ಯ, ಪರಶುರಾಮ ಬೋವಿವಡ್ಡರ ಮುಂತಾದ ಅನೇಕರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿ ಸಲ್ಲಿಕೆಗೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

About the author

Adyot

Leave a Comment