ಆದ್ಯೊತ್ ಸುದ್ದಿನಿಧಿ:
ಅಡಿಕೆ ಮರವನ್ನು ಕಡಿಯುವ ಹಕ್ಕನ್ನು ಅರಣ್ಯ ಇಲಾಖೆಗೆ ಯಾರೂ ಕೊಟ್ಟಿಲ್ಲ.ಮರಗಳನ್ನು ಕಡಿಯಬೇಕು ಎಂದು ಅರಣ್ಯ ಇಲಾಖೆಯ ಯಾವ ನಿಯಮದಲ್ಲಿದೆ? ಮರವನ್ನು ಉಳಿಸಿ ಬೆಳೆಸುವುದು ಅರಣ್ಯ ಇಲಾಖೆ ಕರ್ತವ್ಯ ಮರಕಡಿಯುವುದಲ್ಲ. ಅರಣ್ಯ ಇಲಾಖೆಯ ಈ ಕ್ರಮವನ್ನು ನಾವು ಖಂಡಿಸುತ್ತೆವೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು

ಅವರು ಯಲ್ಲಾಪುರ ಕುಂದರಗಿ ಪಂಚಾಯತ್ ವ್ಯಾಪ್ತಿಯ ಬೆಳ್ಳಂಬೆಯ ಸದಾಶಿವ ನಾಯ್ಕ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮರಕಡಿದ ಜಾಗಕ್ಕೆ ಭೇಟಿ ನೀಡಿ ರೈತನಿಗೆ ಧೈರ್ಯ ತುಂಬಿ ಮಾತನಾಡಿದರು.


ಸುಮಾರು 50 ವರ್ಷದಿಂದ ವಾಸವಿದ್ದ ಸದಾಶಿವ ನಾಯ್ಕ್ ಬೆಳ್ಳಂಬೆ ಅವರಿಗೆ ಸೇರಿದ ಸುಮಾರು 6ರಿಂದ 7 ವರ್ಷದ 40 ಅಡಿಕೆ ಗಿಡಗಳನ್ನು ಫಾರೆಸ್ಟ್ ಅಧಿಕಾರಿಗಳು ಕಡೆದು ಹಾಕಿದ್ದಾರೆ. ಇದು ಸದಾಶಿವ ನಾಯ್ಕ ಅವರ ಕಣ್ಣೀರಿಗೆ ಕಾರಣವಾಗಿದೆ. ಸದಾಶಿವ ನಾಯ್ಕ ಅವರು ಕೂಲಿ ಕೆಲಸಕ್ಕೆ ಹೋದ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಅಮಾನುಷವಾಗಿ ಅಡಿಕೆ ಮರಗಳನ್ನು ಕಡಿದಿದ್ದಾರೆ. ಇವರು ಹತ್ತಾರು ಎಕರೆ ಜಮೀನು ಹೊಂದಿದವರಲ್ಲ. ಹಾಗೂ ನಿನ್ನೆ ಮೊನ್ನೆಯಿಂದ ಕೃಷಿ ಮಾಡುತ್ತಿಲ್ಲ. ಸಾಕಷ್ಟು ವರ್ಷಗಳಿಂದ ಇದೇ ಊರಿನಲ್ಲಿ ಕೃಷಿಯನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಗೆ ರೈತರ ಬಗ್ಗೆ ಕನಿಕರ ಇರಬೇಕು. ಅಡಿಕೆ ಮರವನ್ನು ಕಡಿಯಲು ಯಾರೂ ಇವರಿಗೆ ಅಧಿಕಾರವನ್ನೇ ಕೊಟ್ಟಿಲ್ಲ. ಅರಣ್ಯ ಇಲಾಖೆಯ ಈ ಕ್ರಮ ಖಂಡನೀಯ. ರೈತರ ಪರವಾಗಿ ಸದಾ ನಾವು ಇರಲಿದ್ದೇವೆ ಎಂದರು.



ಈ ಸಂದರ್ಭದಲ್ಲಿ ಬಿಜೆಪಿ ಯಲ್ಲಾಪುರ ಉಪಾಧ್ಯಕ್ಷ ಗಣೇಶ ಹೆಗಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀಪಾ ರಾಘವೇಂದ್ರ ಸಿದ್ದಿ ,ಮಾಳಕೊಪ್ಪ ಮಂಚಿಕೇರಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ್ ಭಟ್ಟ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಬಾಬಣ್ಣ ಪತ್ರಕರ್,ರಾಮಕೃಷ್ಣ ಹೆಗಡೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸೀತಾರಾಮ್ ಗೌಡ,ಭರಣಿ ಬೂತ್ ಅಧ್ಯಕ್ಷ ಗಂಗಾಧರ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
