ಆದ್ಯೋತ್ ಸುದ್ದಿನಿಧಿ:
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯ ಸಂಧರ್ಭದಲ್ಲಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು. ಈ ವಿಚಾರವಾಗಿ ಎಫ್ಐಆರ್ ಕೂಡ ದಾಖಲಾಗಿತ್ತು. ಇಂದು ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆ ನಡೆಸಿದೆ.
ಈ ಸಂದರ್ಭದಲ್ಲಿ ಹೈಕೋರ್ಟ ಸಂಸದ ಅನಂತ್ ಕುಮಾರ್ ಹೆಗಡೆಯವರಿಗೆ ಬಿಸಿಮುಟ್ಟಿಸಿದೆ.ಬುದ್ದಿ ಮಾತನ್ನು ಹೇಳಿದೆ. ಮುಖ್ಯಮಂತ್ರಿ ವಿರುದ್ಧ ಈ ರೀತಿಯ ಪದಗಳನ್ನು ಬಳಸಬಹುದೇ ಎಂದು ಪ್ರಶ್ನೆ ಮಾಡಿದೆ. ಅಭಿಪ್ರಾಯ ಬೇಧವಿರಬಹುದು, ಅವರಿಗೆ ನೀವೂ ಮತವನ್ನು ನೀಡದೆ ಇರಬಹುದು, ಆದರೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳನ್ನು ಗೌರವಿಸದೆ ಇದ್ದರೆ ಹೇಗೆ..? ಚುನಾವಣೆಯಲ್ಲಿ ಒಂದು ಪಕ್ಷ ಬರುತ್ತದೆ ಹೋಗುತ್ತದೆ. ಪ್ರಜಾಪ್ರಭುತ್ವದಲ್ಲಿ ಕೆಲಸ ನಡೆಯುವುದೇ ಹೀಗೆ. ಚುನಾವಣೆಯಲ್ಲಿ ಸೋಲಿಸಿದರು ಭಾಷೆಯ ಬಳಕೆ ಮೇಲೆ ಹಿಡಿತವಿರಲಿ, ಗಮನವಿರಲಿ ಎಂದು ಎಚ್ಚರಿಸಿದೆ.
ಅಯೋಧ್ಯೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಅನಂತಕುಮಾರ್ ಹೆಗಡೆ, ‘ನೀನು ಬರ್ಲಿ, ಇಲ್ಲ ಬಿಡಲಿ, ರಾಮ ಜನ್ಮಭೂಮಿ ಏನೂ ನಿಲ್ಲೋದಿಲ್ಲ ಮಗನೇ’ ಎಂದು ನಿಂದಿಸಿದ್ದರು. ನಾನು ಅಯೋಧ್ಯೆಗೆ ಹೋಗುತ್ತೇನೆ, ಆದರೆ ಜ. 22 ಕ್ಕೆ ಹೋಗಲ್ಲ, ಆಮೇಲೆ ಹೊಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಹೋಗಲ್ಲ ಅಂದಿದ್ದವರು ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ದಮ್ ಎಂದು ಹೆಗಡೆ ಸಭೆಯೊಂದರಲ್ಲಿ ಹೇಳಿದ್ದರು. ಈ ಮಾತಿಗೆ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದರು. ಅನಂತ್ ಕುಮಾರ್ ಹೆಗಡೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರಲ್ಲದೆ ಕೋರ್ಟ ಮೆಟ್ಟಿಲು ಏರಿದ್ದರು.